ಯುಗಾದಿ ವಿಶೇಷ - Ugadi Special

ಯುಗಾದಿ ಹಬ್ಬದ ವಿಶೇಷ ಅಡುಗೆಗಳು

ಯುಗಾದಿ ಹಬ್ಬ ಮತ್ತೆ ಬಂದಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌರಮಾನ ಯುಗಾದಿ ಹಬ್ಬ ಆಚರಿಸುತ್ತೇವೆ. ಮನೆಯಲ್ಲಿಯೇ ಬೆಳೆದ ತರಕಾರಿ ಹಣ್ಣು ದೇವರ ಮೂರ್ತಿ ಮುಂದೆ ಇಟ್ಟು ನೈವೇದ್ಯ ಮಾಡಿ, ಹಿರಿಯರಿಗೆ ನಮಸ್ಕರಿಸಿ ನಂತರ ಹಬ್ಬದೂಟ ಮಾಡುತ್ತೇವೆ. ಕಡುಬು, ಪಾಯಸ, ಕಜ್ಜಾಯ ಮಾಡಿ ಸಂಭ್ರಮಿಸುತ್ತೇವೆ.

ಮೂಡೆ ಕೊಟ್ಟಿಗೆ


ಬೇಕಾಗುವ ವಸ್ತುಗಳು: 2 ಕಪ್ ಕುಚ್ಚಿಲಕ್ಕಿ, 1 ಕಪ್  ಬೆಳ್ತಿಗೆ ಅಕ್ಕಿ, 1 1/2 ಕಪ್ ಉದ್ದಿನಬೇಳೆ, ರುಚಿಗೆ ತಕ್ಕ ಉಪ್ಪು, 10-12 ಬಾಳೆಲೆ
ಮಾಡುವ ವಿಧಾನ: ಬೆಳ್ತಿಗೆ - ಕುಚ್ಚಿಲಕ್ಕಿ 6 ಗಂಟೆ ನೆನೆಸಿ. ಉದ್ದಿನಬೇಳೆ ಪ್ರತ್ಯೇಕವಾಗಿ ನೆನೆಸಿ. ನಂತರ ಉದ್ದಿನಬೇಳೆ ತೊಳೆದು ನುಣ್ಣಗೆ ರುಬ್ಬಿ. ಬೆಳ್ತಿಗೆ ಅಕ್ಕಿ ಕುಚ್ಚಿಲಕ್ಕಿ ತೊಳೆದು ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಅಕ್ಕಿ ಹಿಟ್ಟು ಉದ್ದಿನ ಹಿಟ್ಟು ಬೆರೆಸಿ, ಉಪ್ಪು ಹಾಕಿ ಕಲಸಿ ಮುಚ್ಚಿಡಿ. ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕಿರಲಿ. ಮಾರನೆ ದಿನ ಬಾಡಿಸಿ ಸುರುಳಿಯಾಗಿ ಸುತ್ತಿದ ಬಾಳೆಲೆಯಲ್ಲಿ ಹಿಟ್ಟು ಎರೆದು, ಮೇಲಿನ ತುದಿಯನ್ನು ಬಾಳೆ ನಾರಿನಿಂದ ಬಿಗಿದು ಕಟ್ಟಿ, ಉಗಿಪಾತ್ರೆಯಲ್ಲಿಟ್ಟು 1 ಗಂಟೆ ಬೇಯಿಸಿ. ಬಾಳೆಲೆಯಲ್ಲಿ ಮಾಡುವುದರಿಂದ ಪರಿಮಳ ಮತ್ತು ಸ್ವಾದ ಚೆನ್ನಾಗಿರುತ್ತದೆ. ತೆಂಗಿನಕಾಯಿ ಚಟ್ನಿ, ಮೆಂತೆಕಾಳು ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಗರಿಗರಿ ಕಾಯಿವಡೆ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/2 ಕಪ್ ಕಾಯಿತುರಿ, 1 ಚಮಚ ಜೀರಿಗೆ, 1/4 ಚಮಚ ಅರಸಿನ ಪುಡಿ, 1 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 3-4 ಗಂಟೆ ನೆನೆಸಿ ನಂತರ ತೊಳೆದು, ತೆಂಗಿನತುರಿ, ಜೀರಿಗೆ, ಉಪ್ಪು, ಅರಸಿನಪುಡಿ, ಕೆಂಪುಮೆಣಸು ಸೇರಿಸಿ, ಗಟ್ಟಿಗೆ ನುಣ್ಣಗೆ ರುಬ್ಬಿ. ನಂತರ ಬೇಳೆಲೆಯ ಹಿಂಬದಿಗೆ ಎಣ್ಣೆ ಹಚ್ಚಿ ಪುಟ್ಟ ಪುಟ್ಟ ವಡೆ ತಟ್ಟಿ. ನಂತರ ಕಾದ ಎಣ್ಣೆಗೆ 10-12 ವಡೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದು, ಸ್ವಲ್ಪ ಹೊತ್ತು ಬಿಳಿ ಹಾಳೆಯಮೇಲೆ ಹಾಕಿ ನಂತರ ಡಬ್ಬದಲ್ಲಿ ಹಾಕಿ. ಗರಿಗರಿಯಾಗಿರುವ ಈ ವಡೆ ರುಚಿಕರವಷ್ಟೇ ಅಲ್ಲ, 8 ದಿನಗಳವರೆಗೂ ಕೆಡದು.

ಅಕ್ಕಿ ಪಾಯಸ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ತೆಂಗಿನಕಾಯಿ ಹಾಲು, 1 1/2 ಕಪ್ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ, ಚಿಟಿಕಿ ಉಪ್ಪು

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಗೆ 4 ಕಪ್ ನೀರುಹಾಕಿ ಮೆತ್ತಗೆ ಬೇಯಿಸಿ. ನಂತರ ತೆಂಗಿನಕಾಯಿ ಹಾಲು ಸೇರಿಸಿ ಕುದಿಸಿ. ನಂತರ ಉಪ್ಪು, ಏಲಕ್ಕಿ ಪುಡಿ ಹಾಕಿ ಬೆರೆಸಿ. ದೇವರಿಗೆ ನೈವೇದ್ಯ ಮಾಡಿ ಸವಿಯಿರಿ. ಬೆಲ್ಲದ ಪಾಯಸ ಸಕ್ಕರೆ ಪಾಯಸಕ್ಕಿಂತಲೂ ರುಚಿ.


ಕಡಲೆ ಹಿಟ್ಟು ಮನೋಹರ



ಬೇಕಾಗುವ ವಸ್ತುಗಳು: 2 ಕಪ್ ಕಡಲೆ ಹಿಟ್ಟು, 1 ಕಪ್ ತುಪ್ಪ, 1 1/2 ಕಪ್ ಸಕ್ಕರೆ, 4 - 5 ಗೋಡಂಬಿ, 2 ಲವಂಗ, 3 - 4 ಏಲಕ್ಕಿ, 5 - 6 ದ್ರಾಕ್ಷಿ

ಮಾಡುವ ವಿಧಾನ: ಕಡಲೆಹಿಟ್ಟನ್ನು ನೀರಿನಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ನಂತರ ಬಾಣಲೆಗೆ ತುಪ್ಪ ಹಾಕಿ ಕಾಯಿಸಿ. ನಂತರ ಲಾಡಿನ ಜರಡಿಯಲ್ಲಿ ಹಿಟ್ಟು ಹಾಕಿ ಕಾದ ತುಪ್ಪಕ್ಕೆ ಬಿಡಬೇಕು. ಬೇರೆ ಬೇರೆ ಕಾಳುಗಳಾಗುತ್ತವೆ. ಅದನ್ನು ತಿರುವಿ ಗರಿಗರಿಯಾದಾಗ ತೆಗೆದಿಡಿ. ನಂತರ ಬಾಣಲೆಯಲ್ಲಿ ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಪಾಕ ಕುದಿದು ನೂಲಿಗೆ ಬರಲಿ. ನಂತರ ಕೆಳಗಿಳಿಸಿ. ದ್ರಾಕ್ಷಿ, ಗೋಡಂಬಿ ಏಲಕ್ಕಿ, ಲವಂಗ ಹಾಕಿ. ಮಾಡಿಟ್ಟ ಕಾಳು ಹಾಕಿ ಚೆನ್ನಾಗಿ ತಿರುವಿ. ಈಗ ಕಡಲೆ ಹಿಟ್ಟಿನ ಮನೋಹರ ಸಿದ್ಧ.