ಕಷಾಯಗಳು

ಚಳಿಗಾಲದ ಆರೋಗ್ಯಕರ ಕಷಾಯಗಳು

ಚಳಿಗಾಲದ ಶೀತ ಹವೆಗೆ, ತಲೆಭಾರ, ಗಂಟಲು ಕೆರೆತ, ಸೈನಸೈಟೀಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಷಾಯಗಳನ್ನು ಆಗಾಗ ಮಾಡಿ ಸೇವಿಸುತ್ತಿದ್ದರೆ ದೇಹದ ರೋಗನಿರೋಧಕ ಶಕ್ತಿ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಮಾಡಬಹುದಾದ ಕಷಾಯಗಳ ಪರಿಚಯ ಇಲ್ಲಿದೆ.

ಕೊತ್ತಂಬರಿ - ಜೀರಿಗೆ - ಜೇಷ್ಠಮಧು ಕಷಾಯ


ಬೇಕಾಗುವ ವಸ್ತುಗಳು: 1/2 ಚಮಚ ಕೊತ್ತಂಬರಿ, 7-8 ಕಾಳುಮೆಣಸು, 1/2 ಚಮಚ ಜೇಷ್ಠಮಧು ಪುಡಿ, 1/2 ಚಮಚ ಒಣಶುಂಠಿ ಪುಡಿ, 1/2 ಚಮಚ ಜೀರಿಗೆ, 1 ಲೋಟ ಹಾಲು, 1 ಚಮಚ ಬೆಲ್ಲ

ಮಾಡುವ ವಿಧಾನ: 1 ಕಪ್ ನೀರು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿ. ಕೊತ್ತಂಬರಿ, ಕಾಳುಮೆಣಸು, ಜೀರಿಗೆ ಸ್ವಲ್ಪ ಬೆಚ್ಚಗೆ ಹುರಿದು ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕಿ ತೊಳಸಿ. ನಂತರ ಬೆಲ್ಲ ಹಾಲು ಹಾಕಿ 10-15 ನಿಮಷ ಕುದಿಸಿ. ಶುಂಠಿ ಪುಡಿ, ಜೇಷ್ಠಮಧು ಪುಡಿ ಹಾಕಿ 5 ನಿಮಿಷ ಕುದಿಸಿ ಕೆಳಗಿಳಿಸಿ. ನಂತರ ಸೋಸಿ ಹಾಲು ಬೆರೆಸಿ ಕಪ್ ಗೆ ಹಾಕಿ ಕುಡಿಯಿರಿ. ಚಳಿಗಾಲದ ಶೀತ, ಗಂಟಲು ನೋವು, ಜ್ವರ, ಕೆಮ್ಮು, ದಮ್ಮಿಗೆ ಈ ಕಷಾಯ ಒಳ್ಳೆಯದು.





ಅಮೃತಬಳ್ಳಿಯ ಕಷಾಯ


ಬೇಕಾಗುವ ವಸ್ತುಗಳು: ಅಮೃತಬಳ್ಳಿಯ 1 ಇಂಚು ಉದ್ದದ ತುಂಡು, 1/4 ಇಂಚು ಉದ್ದದ ಜೇಷ್ಠಮಧು, 1 ಚಮಚ ಜೀರಿಗೆ, 5 ತುಳಸಿ ಎಲೆ, 2 ಚಮಚ ಜೇನುತುಪ್ಪ

ಮಾಡುವ ವಿಧಾನ: ಅಮೃತಬಳ್ಳಿಯ ತುಂಡು ಜಜ್ಜಿ, 2 ಕಪ್ ನೀರು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು, ಜಜ್ಜಿದ ಜೇಷ್ಠಮಧು, ಜೀರಿಗೆ, ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಿ, 1 ಕಪ್ ಗೆ ಇಳಿಸಿ ನಂತರ ಸೋಸಿ ಕಪ್ ಗೆ ಹಾಕಿ. ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿ. ಈ ಕಷಾಯ ಜ್ವರ, ಶೀತ, ನೆಗಡಿಯನ್ನು ನಿಯಂತ್ರಿಸುತ್ತದೆ.







ಶುಂಠಿ ಕಷಾಯ


ಬೇಕಾಗುವ ವಸ್ತುಗಳು: 1 ಇಂಚು ಉದ್ದದ ಶುಂಠಿ, 2 ಕಪ್ ನೀರು, ಒಂದುವರೆ ಚಮಚ ಬೆಲ್ಲ, 1/4 ಕಪ್ ಹಾಲು

ತಯಾರಿಸುವ ವಿಧಾನ: ಶುಂಠಿ ತೊಳೆದು ಜಜ್ಜಿ, ಎರಡು ಕಪ್ ನೀರು ಹಾಕಿ, ಕುದಿಸಿ. ನಂತರ ಬೆಲ್ಲ ಹಾಕಿ ಹತ್ತು ನಿಮಿಷ ಕುದಿಸಿ ಕೆಳಗಿಳಿಸಿ. ಬಳಿಕ ಶೋಧಿಸಿ ಬಿಸಿಹಾಲು ಸೇರಿಸಿ ಬಿಸಿಯಿರುವಾಗಲೇ ಕುಡಿಯಿರಿ. ಗಂಟಲು ಕೆರೆತ, ಶೀತ, ಸೈನಸೈಟೀಸ್, ತಲೆಭಾರ ಈ ಸಮಸ್ಯೆಗಳಿಗೆ ಈ ಕಷಾಯ ಒಳ್ಳೆಯದು.







ದೊಡ್ಡಪತ್ರೆ ಕಷಾಯ


ಬೇಕಾಗುವ ವಸ್ತುಗಳು: 3-4 ದೊಡ್ಡಪತ್ರೆ ಎಲೆ, 1/2 ಚಮಚ ಜೀರಿಗೆ, 1/2 ಚಮಚ ಕಾಳುಮೆಣಸು, 2 ಚಮಚ ಜೇನುತುಪ್ಪ

ಮಾಡುವ ವಿಧಾನ: ಜೀರಿಗೆ, ಕಾಳುಮೆಣಸು ಪುಡಿಮಾಡಿ, 1 ಕಪ್ ನೀರಿಗೆ ತೊಳೆದ ದೊಡ್ಡಪತ್ರೆ ಎಲೆ, ಪುಡಿಮಾಡಿದ ಕಾಳುಮೆಣಸು, ಜೀರಿಗೆ ಪುಡಿ ಹಾಕಿ ಮುಚ್ಚಿ, 1 ನಿಮಿಷ ಕುದಿಸಿ ಇಳಿಸಿ. ನಂತರ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಪುನಹ ಪಾತ್ರೆಗೆ ಹಾಕಿ ಸ್ವಲ್ಪ ನೀರುಹಾಕಿ ಮುಚ್ಚಿ ಕುದಿಸಿ ನಂತರ ಒಲೆಯಿಂದ ಇಳಿಸಿ ನಂತರ ಸೋಸಿ ಜೇನುತುಪ್ಪ ಹಾಕಿ ಕುಡಿಯಿರಿ. ಕೆಮ್ಮು, ದಮ್ಮು, ಉಬ್ಬಸ, ಅಜೀರ್ಣ ಮುಂತಾದ ತೊಂದರೆಗಳ ಶಮನಕ್ಕೆ ಒಳ್ಳೆಯದು.





ನೀರುಳ್ಳಿ ಕಷಾಯ


ಬೇಕಾಗುವ ವಸ್ತುಗಳು: 1 ನೀರುಳ್ಳಿ, 1 ಚಮಚ ಜೀರಿಗೆ, 1 ಕಪ್ ನೀರು, ಸಣ್ಣ ತುಂಡು ಬೆಲ್ಲ

ಮಾಡುವ ವಿಧಾನ: ಒಲೆಯ ಮೇಲೆ ಪಾತ್ರೆಯಿಟ್ಟು ನೀರುಹಾಕಿ ನೀರುಳ್ಳಿ ಜೀರಿಗೆ ಹಾಕಿ ಸ್ವಲ್ಪ ಕುದಿದ ಮೇಲೆ ಇಳಿಸಿ, ಮಿಕ್ಸಿಗೆ ಹಾಕಿ ರುಬ್ಬಿ. ಪುನಹ ಒಲೆಯ ಮೇಲಿಟ್ಟು ಸ್ವಲ್ಪ ಬತ್ತುವ ತನಕ ಕುದಿಸಿ. ನಂತರ ಶೋಧಿಸಿ ಗ್ಲಾಸಿಗೆ ಹಾಕಿ ಕುಡಿಯಿರಿ. ಶೀತ ಕೆಮ್ಮಿಗೆ ಇದು ರಾಮಬಾಣ.








ಒಂದೆಲಗದ ಕಷಾಯ


ಬೇಕಾಗುವ ವಸ್ತುಗಳು: ಒಂದು ಹಿಡಿ ಬೇರು ಸಹಿತ ಒಂದೆಲಗದ ಎಲೆ, 1 ಚಮಚ ಕಾಳುಮೆಣಸು ಪುಡಿ, 2 ಚಮಚ ಜೇನುತುಪ್ಪ

ಮಾಡುವ ವಿಧಾನ :  2 ಕಪ್ ನೀರಿಗೆ ಬೇರು ಸಹಿತ ಸ್ವಚ್ಛವಾಗಿ ತೊಳೆದ ಒಂದೆಲಗದ ಎಲೆ, ಕಾಳುಮೆಣಸು ಪುಡಿಹಾಕಿ ಚೆನ್ನಾಗಿ 1 ಕಪ್ ಆಗುವಷ್ಟು ಕುದಿಸಿ. ನಂತರ ಇಳಿಸಿ ಶೋಧಿಸಿ, ಜೇನು ಹಾಕಿ ಸರಿಯಾಗಿ ಬೆರೆಸಿ, ಬಿಸಿಬಿಸಿಯಾಗಿ ಕುಡಿಯಿರಿ. ಇದು ಜ್ವರ ನೆಗಡಿಗಳಿಗೆ ಉತ್ತಮ ಪರಿಹಾರ.




ಕ್ಯಾರೆಟ್

ಕ್ಯಾರೆಟ್ ನ ಅಡುಗೆ

ಕ್ಯಾರೆಟ್ ಶಕ್ತಿವರ್ಧಕ ತರಕಾರಿ. ಇದನ್ನು ಸದಾಕಾಲ ಸೇವಿಸುತ್ತಿದ್ದಲ್ಲಿ ಪಚನಾಂಗಗಳಲ್ಲಿ ಹುಟ್ಟುವ ಅನೇಕ ರೋಗಗಳಿಂದ ಮುಕ್ತರಾಗಬಹುದು. ಕಣ್ಣು, ನರಮಂಡಲ, ಪಿತ್ತಕೋಶ, ಶ್ವಾಸಕೋಶ, ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಲ್ಲಿ ಹೆಚ್ಚು ಗುಣ ಕಂಡುಬರುವುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದು.

ಕ್ಯಾರೆಟ್ ದೋಸೆ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ,  3 -4 ಕ್ಯಾರೆಟ್ ತುರಿ, 1/4 ಕಪ್ ಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ನಿಂಬೆರಸ, 2 - 3 ಚಮಚ ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 2 - 3 ಗಂಟೆ ನೆನೆಸಿ. ನಂತರ ಚೆನ್ನಾಗಿ ತೊಳೆದು ಕ್ಯಾರೆಟ್ ತುರಿ, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ನಿಂಬೆರಸ ಸೇರಿಸಿ 5 - 10 ನಿಮಿಷ ಇಡಿ. ನಂತರ ತವಾ ಒಲೆಯ ಮೇಲಿಟ್ಟು ಎಣ್ಣೆಪಸೆ ಮಾಡಿ. 1 ಸೌಟು ಹಿಟ್ಟು ಎರೆದು ತೆಳ್ಳಗೆ ಹರಡಿ ಮುಚ್ಚಿ. ಬೆಂದಾಗ ಕವುಚಿ ಹಾಕಿ ತೆಗೆಯಿರಿ. ಈಗ ಆರೋಗ್ಯಕರವಾದ ದೋಸೆ ಸವಿಯಲು ಸಿದ್ಧ.






ಕ್ಯಾರೆಟ್ ರೊಟ್ಟಿ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ,  2 ಕ್ಯಾರೆಟ್ ತುರಿ, 1/4 ಕಪ್ ಕಾಯಿತುರಿ, 1 - 2 ಹಸಿಮೆಣಸು, 1 ಈರುಳ್ಳಿ, ಚಿಟಿಕಿ ಅರಸಿನ, 1/2 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ತುಪ್ಪ

ಮಾಡುವ ವಿಧಾನ: ಅಕ್ಕಿಯನ್ನು ೨-೩ ಗಂಟೆ ನೆನೆಸಿ ತೊಳೆದು ತರಿತರಿಯಾಗಿ ರುಬ್ಬಿ. ನಂತರ ಕ್ಯಾರೆಟ್ ತುರಿ, ತೆಂಗಿನ ತುರಿ, ಹಸಿಮೆಣಸು ಚೂರು, ಈರುಳ್ಳಿ ಚೂರು, ಅರಸಿನ, ಉಪ್ಪು, ಮೊಸರು ಸೇರಿಸಿ ಕಲಸಿ. ತವಾ ಒಲೆಯ ಮೇಲಿಟ್ಟು ಬಿಸಿಯಾದಾಗ ೧ ಸೌಟು ಹಿಟ್ಟು ಹಾಕಿ ಹರಡಿ ಮುಚ್ಚಿಡಿ. ನಂತರ ತುಪ್ಪ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಪೌಷ್ಠಿಕ ರೊಟ್ಟಿಯನ್ನು ಚಟ್ನಿಯೊಂದಿಗೆ ಸವಿಯಿರಿ.





ಕ್ಯಾರೆಟ್ ಉಂಡೆ


ಬೇಕಾಗುವ ವಸ್ತುಗಳು: 2 ಕಪ್ ಕ್ಯಾರೆಟ್ ತುರಿ, 1 ಕಪ್ ಚಿರೋಟಿ ರವೆ,  ಒಂದುವರೆ ಕಪ್ ಸಕ್ಕರೆ ಪುಡಿ, 10-12 ಗೋಡಂಬಿ, 11-12 ಒಣದ್ರಾಕ್ಷೆ, 1/4 ಕಪ್ ತುಪ್ಪ,  1/2 ಚಮಚ ಏಲಕ್ಕಿ ಪುಡಿ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಕ್ಯಾರೆಟ್ ತುರಿ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದು ಸಕ್ಕರೆ ಪುಡಿ, ಏಲಕ್ಕಿ ಪುಡಿ, ಹುರಿದ ಕ್ಯಾರೆಟ್, ಹುರಿದ ರವೆ ಎಲ್ಲಾ ಬೆರೆಸಿ, ಬಿಸಿಯಿರುವಾಗಲೇ ಉಂಡೆ ಮಾಡಿ. ರುಚಿಯಾದ ಈ ಉಂಡೆಯನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.