ಪುದೀನ - Mint

ಪುದೀನ   ಸೊಪ್ಪಿನ  ರುಚಿಕರ   ಅಡುಗೆಗಳು

 

ಅಜೀರ್ಣ  ವ್ಯಾಧಿಯಿಂದ   ನರಳುತ್ತಿರುವವರು  ಪ್ರತಿದಿನ  5-6   ಎಲೆಗಳನ್ನು  ಊಟಕ್ಕೆ   ಮೊದಲು  ಜಗಿದು  ತಿನ್ನುವುದರಿಂದ  ತಿಂದ   ಆಹಾರ   ಚೆನ್ನಾಗಿ   ಜೀರ್ಣವಾಗುವುದು .   ಪುದೀನ  ಸೊಪ್ಪಿನ  ಟೀ  ತಯಾರಿಸಿ   ದಿನಕ್ಕೆ  3 ಬಾರಿ 4 ಚಮಚದಷ್ಟು ಸೇವಿಸುವುದರಿಂದ   ಬಿಕ್ಕಳಿಕೆ  ನಿಲ್ಲುವುದು . ಪುದೀನ   ಸೊಪ್ಪಿನ  ಚಟ್ನಿಯನ್ನು  ಸೇವಿಸುವುದರಿಂದ  ಹಸಿವೆ   ಹೆಚ್ಚಾಗುತ್ತದೆ . ಪುದೀನ  ಸೊಪ್ಪಿನ  ಕಷಾಯ  ತಯಾರಿಸಿ  ದಿನಕ್ಕೆ   3 ಬಾರಿ  4  ಚಮಚದಷ್ಟು    ಸೇವಿಸುದರಿಂದ  ಕೆಮ್ಮು  ಹಾಗೂ  ನೆಗಡಿ  ಗುಣವಾಗುವುದು . ಹೀಗೆ   ಹಲವು   ಔಷಧೀಯ   ಗುಣಗಳಿರುವ  ಪುದೀನ   ಸೊಪ್ಪನ್ನು    ಅಡುಗೆಯಲ್ಲಿ   ಆಗಾಗ್ಗ ಉಪಯೋಗಿಸುತ್ತಿದ್ದರೆ    ನಮ್ಮ  ಆರೋಗ್ಯ   ಉತ್ತಮವಾಗುವುದು.


ಪುದೀನ ಉಪ್ಪಿಟ್ಟು

 

 

ಬೇಕಾಗುವ  ವಸ್ತುಗಳು:  1ಸಣ್ಣ ಕಟ್ಟು ಪುದೀನ,  1-2  ಹಸಿಮೆಣಸು,  1-2 ಲವಂಗ,  2  ಚಮಚ ಕೊತ್ತಂಬರಿಸೊಪ್ಪು, 1ಕಪ್  ಉಪ್ಪಿಟ್ಟು ರವೆ,   2ಚಮಚ ಎಣ್ಣೆ,     2ಚಮಚ ತುಪ್ಪ,  1ಚಮಚ ಸಾಸಿವೆ ,  1 ಚಮಚ ಕಡಲೆಬೇಳೆ, 1ಚಮಚ  ಉದ್ದಿನ ಬೇಳೆ, 2 ಚಮಚ  ನೆಲಕಡಲೆಬೀಜ,  ಚಿಟಿಕೆ ಇಂಗು , 1ಒಣಮೆಣಸು, 1 ಎಸಳು ಕರಿಬೇವು, 1/4 ಕಪ್  ಟೊಮೆಟೊ ಚೂರು,1/2 ಚಮಚ
ಬೆಲ್ಲ , ರುಚಿಗೆ ತಕ್ಕಷ್ಟು ಉಪ್ಪು, 1/4 ಕಪ್ ತೆಂಗಿನತುರಿ.
ಮಾಡುವ ವಿಧಾನ : ಬಾಣಲೆ  ಒಲೆಯ ಮೇಲಿಟ್ಟು  1ಚಮಚ ತುಪ್ಪ ಹಾಕಿ  ಬಿಸಿಯಾದಾಗ  ರವೆ  ಹಾಕಿ ಸ್ವಲ್ಪ ಪರಿಮಳ ಬರುವ ವರೆಗೆ  ಹುರಿದು  ಕೆಳಗಿಳಿಸಿ.  ನಂತರ  ಸ್ಚಚ್ಚವಾಗಿ   ತೊಳೆದ  ಪುದೀನ  ಹಸಿಮೆಣಸು, ಲವಂಗ, ಕೊತ್ತಂಬರಿಸೊಪ್ಪು  ಸ್ನಲ್ಪ ನೀರು ಸೇರಿಸಿ ರುಬ್ಬಿ. ನಂತರ ರವೆ  ಹುರಿದ ಬಾಣಲೆ  ಒಲೆಯ ಮೇಲಿಟ್ಟು ಎಣ್ಣೆ, ತುಪ್ಪ, ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಕಡಲೆಬೇಳೆ,  ಉದ್ದಿನಬೇಳೆ , ನೆಲಕಡಲೆಬೀಜ,  ಇಂಗು, ಒಣಮೆಣಸು, ಕರಿಬೇವು ಹಾಕಿ ಬೇಳೆ ಕೆಂಪಾದಾಗ ಟೊಮೆಟೊಚೂರು, ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು,ನೀರು ಹಾಕಿ ನೀರು ಕುದಿದಾಗ  ಹುರಿದ ರವೆ  ಹಾಕಿ ಸಣ್ಣ ಉರಿಯಲ್ಲಿ 8-10 ನಿಮಿಷ ರವೆ ಬೇಯಲಿ . ನಂತರ ಕೆಳಗಿಳಿಸಿ  ತೆಂಗಿನತುರಿ ಹಾಕಿ ತೊಳಸಿ ಈಗ ಸ್ವಾದಿಷ್ಟವಾದ ಪುದೀನ  ಉಪ್ಪಿಟ್ಟು  ಸವಿಯಲು   ಸಿದ್ಧ.





ಪುದೀನ ಮಸಾಲ ಲಸ್ಸೀ

 

 

ಬೇಕಾಗುವ  ವಸ್ತುಗಳು : 1 ಸಣ್ಣ ಕಟ್ಟು ಪುದೀನ,1/4" ಉದ್ದದ ಶುಂಠಿ, 1/4 ಚಮಚ ಜೀರಿಗೆ, 1/4 ಚಮಚ  ಕಾಳುಮೆಣಸು, 1 ಕಪ್  ಮೊಸರು, ರುಚಿಗೆ ತಕ್ಕಷ್ಟು ಉಪ್ಪು, 1ಹಸಿಮೆಣಸು.
ಮಾಡುವ ವಿಧಾನ: ತೊಳೆದು ಸ್ವಚ್ಚಗೊಳಿಸಿದ  ಪುದೀನ, ಶುಂಠಿ ಚೂರು, ಶುಂಠಿ, ಜೀರಿಗೆ, ಕಾಳುಮಮೆಣಸು, ಹಸಿಮೆಣಸು,ಮೊಸರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ.  ನಂತರ ಶೋಧಿಸಿ, ಗ್ಲಾಸಿಗೆ ಹಾಕಿ  ಬೆಕಾದಷ್ಟು ನೀರು, ಉಪ್ಪು ಸೇರಿಸಿ ಚೆನ್ನಾಗಿ ಕಲಕಿ 1 ಗಂಟೆ ಹಾಗೆಯೇ ಇಟ್ಟು ಕುಡಿದರೆ  ಹೊಟ್ಟೆಗೆ ಹಿತವಾದ ಪುದೀನ ಮಸಾಲ ಲಸ್ಸೀ ಸವಿಯಲು ಸಿದ್ಧ.





ಪುದೀನ ಚಟ್ನಿ

 

 

ಬೇಕಾಗುವ ವಸ್ತುಗಳು: 1ಕಪ್ ತೊಳದು ಸ್ವಚ್ಚಗೊಳಿಸಿದ ಪುದೀನ, 2ಚಮಚ ಹುರಿಕಡಲೆ, 2-3 ಹಸಿಮೆಣಸು, 2 ಚಮಚ  ನಿಂಬೆರಸ, ಸಣ್ಣ ತುಂಡು ಶುಂಠಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಕಪ್ ತೆಂಗಿನ ತುರಿ,  2ಚಮಚ ಎಣ್ಣೆ , 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು .
ಮಾಡುವ ವಿಧಾನ: ಬಾಣಲೆ ಒಲೆಯ  ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಪುದೀನ, ಹಸಿಮೆಣಸು ಚೂರು ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಶುಂಠಿ, ತೆಂಗಿನತುರಿ, ಹುರಿಕಡಲೆ, ಹುರಿದ ಪುದೀನ, ಹಸಿಮೆಣಸು ಮಿಶ್ರಣ, ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು ಹಾಕಿ  ಒಗ್ಗರಣೆ ಕೊಡಿ. ಈಗ ಸ್ಷಾದಿಷ್ಟವಾದ ಪುದೀನ ಚಟ್ನಿ, ಅನ್ನ, ದೋಸೆ, ಇಡ್ಲಿಯೊಂದಿಗೆ  ಸವಿಯಲು ಸಿದ್ಧ.











ಪುದೀನ ಜ್ಯೂಸ್

 

 

ಬೇಕಾಗುವ ವಸ್ತುಗಳು: 1 ಸಣ್ಣ ಕಟ್ಟು ಪುದೀನ, ಸಣ್ಣ ತುಂಡು ಶುಂಠಿ, 1/4 ಕಪ್ ಸಕ್ಕರೆ ಯಾ 4 ಚಮಚ ಜೇನುತುಪ್ಪ, 2 ಚಮಚ ನಿಂಬೆರಸ, ಚಿಟಿಕೆ ಉಪ್ಪು, 1/4ಚಮಚ ಏಲಕ್ಕಿ ಪುಡಿ.
ಮಾಡುವ ವಿಧಾನ: ಸ್ಷಚ್ಚಗೊಳಿಸಿದ ಪುದೀನ, ಶುಂಠಿ, ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಅದನ್ನು ಸೋಸಿ ನಿಂಬೆರಸ ಸಕ್ಕರೆ ಯಾ ಜೇನುತುಪ್ಪ, ಏಲಕ್ಕಿಪುಡಿ, ಉಪ್ಪುಸೇರಿಸಿ ಚೆನ್ನಾಗಿ ಬೆರೆಸಿ ನಂತರ ಗ್ಲಾಸಿಗೆ ಹಾಕಿ ಕುಡಿಯಿರಿ ಇದು ಕುಡಿಯಲು ಚೆನ್ನಾಗಿದ್ದು, ಜೀರ್ಣಕಾರಿ ಕೂಡಾ.






ಯುಗಾದಿ ವಿಶೇಷ - Ugadi Special

ಯುಗಾದಿ ಹಬ್ಬದ ವಿಶೇಷ ಅಡುಗೆಗಳು

ಯುಗಾದಿ ಹಬ್ಬ ಮತ್ತೆ ಬಂದಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌರಮಾನ ಯುಗಾದಿ ಹಬ್ಬ ಆಚರಿಸುತ್ತೇವೆ. ಮನೆಯಲ್ಲಿಯೇ ಬೆಳೆದ ತರಕಾರಿ ಹಣ್ಣು ದೇವರ ಮೂರ್ತಿ ಮುಂದೆ ಇಟ್ಟು ನೈವೇದ್ಯ ಮಾಡಿ, ಹಿರಿಯರಿಗೆ ನಮಸ್ಕರಿಸಿ ನಂತರ ಹಬ್ಬದೂಟ ಮಾಡುತ್ತೇವೆ. ಕಡುಬು, ಪಾಯಸ, ಕಜ್ಜಾಯ ಮಾಡಿ ಸಂಭ್ರಮಿಸುತ್ತೇವೆ.

ಮೂಡೆ ಕೊಟ್ಟಿಗೆ


ಬೇಕಾಗುವ ವಸ್ತುಗಳು: 2 ಕಪ್ ಕುಚ್ಚಿಲಕ್ಕಿ, 1 ಕಪ್  ಬೆಳ್ತಿಗೆ ಅಕ್ಕಿ, 1 1/2 ಕಪ್ ಉದ್ದಿನಬೇಳೆ, ರುಚಿಗೆ ತಕ್ಕ ಉಪ್ಪು, 10-12 ಬಾಳೆಲೆ
ಮಾಡುವ ವಿಧಾನ: ಬೆಳ್ತಿಗೆ - ಕುಚ್ಚಿಲಕ್ಕಿ 6 ಗಂಟೆ ನೆನೆಸಿ. ಉದ್ದಿನಬೇಳೆ ಪ್ರತ್ಯೇಕವಾಗಿ ನೆನೆಸಿ. ನಂತರ ಉದ್ದಿನಬೇಳೆ ತೊಳೆದು ನುಣ್ಣಗೆ ರುಬ್ಬಿ. ಬೆಳ್ತಿಗೆ ಅಕ್ಕಿ ಕುಚ್ಚಿಲಕ್ಕಿ ತೊಳೆದು ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಅಕ್ಕಿ ಹಿಟ್ಟು ಉದ್ದಿನ ಹಿಟ್ಟು ಬೆರೆಸಿ, ಉಪ್ಪು ಹಾಕಿ ಕಲಸಿ ಮುಚ್ಚಿಡಿ. ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕಿರಲಿ. ಮಾರನೆ ದಿನ ಬಾಡಿಸಿ ಸುರುಳಿಯಾಗಿ ಸುತ್ತಿದ ಬಾಳೆಲೆಯಲ್ಲಿ ಹಿಟ್ಟು ಎರೆದು, ಮೇಲಿನ ತುದಿಯನ್ನು ಬಾಳೆ ನಾರಿನಿಂದ ಬಿಗಿದು ಕಟ್ಟಿ, ಉಗಿಪಾತ್ರೆಯಲ್ಲಿಟ್ಟು 1 ಗಂಟೆ ಬೇಯಿಸಿ. ಬಾಳೆಲೆಯಲ್ಲಿ ಮಾಡುವುದರಿಂದ ಪರಿಮಳ ಮತ್ತು ಸ್ವಾದ ಚೆನ್ನಾಗಿರುತ್ತದೆ. ತೆಂಗಿನಕಾಯಿ ಚಟ್ನಿ, ಮೆಂತೆಕಾಳು ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಗರಿಗರಿ ಕಾಯಿವಡೆ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/2 ಕಪ್ ಕಾಯಿತುರಿ, 1 ಚಮಚ ಜೀರಿಗೆ, 1/4 ಚಮಚ ಅರಸಿನ ಪುಡಿ, 1 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 3-4 ಗಂಟೆ ನೆನೆಸಿ ನಂತರ ತೊಳೆದು, ತೆಂಗಿನತುರಿ, ಜೀರಿಗೆ, ಉಪ್ಪು, ಅರಸಿನಪುಡಿ, ಕೆಂಪುಮೆಣಸು ಸೇರಿಸಿ, ಗಟ್ಟಿಗೆ ನುಣ್ಣಗೆ ರುಬ್ಬಿ. ನಂತರ ಬೇಳೆಲೆಯ ಹಿಂಬದಿಗೆ ಎಣ್ಣೆ ಹಚ್ಚಿ ಪುಟ್ಟ ಪುಟ್ಟ ವಡೆ ತಟ್ಟಿ. ನಂತರ ಕಾದ ಎಣ್ಣೆಗೆ 10-12 ವಡೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದು, ಸ್ವಲ್ಪ ಹೊತ್ತು ಬಿಳಿ ಹಾಳೆಯಮೇಲೆ ಹಾಕಿ ನಂತರ ಡಬ್ಬದಲ್ಲಿ ಹಾಕಿ. ಗರಿಗರಿಯಾಗಿರುವ ಈ ವಡೆ ರುಚಿಕರವಷ್ಟೇ ಅಲ್ಲ, 8 ದಿನಗಳವರೆಗೂ ಕೆಡದು.

ಅಕ್ಕಿ ಪಾಯಸ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ತೆಂಗಿನಕಾಯಿ ಹಾಲು, 1 1/2 ಕಪ್ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ, ಚಿಟಿಕಿ ಉಪ್ಪು

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಗೆ 4 ಕಪ್ ನೀರುಹಾಕಿ ಮೆತ್ತಗೆ ಬೇಯಿಸಿ. ನಂತರ ತೆಂಗಿನಕಾಯಿ ಹಾಲು ಸೇರಿಸಿ ಕುದಿಸಿ. ನಂತರ ಉಪ್ಪು, ಏಲಕ್ಕಿ ಪುಡಿ ಹಾಕಿ ಬೆರೆಸಿ. ದೇವರಿಗೆ ನೈವೇದ್ಯ ಮಾಡಿ ಸವಿಯಿರಿ. ಬೆಲ್ಲದ ಪಾಯಸ ಸಕ್ಕರೆ ಪಾಯಸಕ್ಕಿಂತಲೂ ರುಚಿ.


ಕಡಲೆ ಹಿಟ್ಟು ಮನೋಹರ



ಬೇಕಾಗುವ ವಸ್ತುಗಳು: 2 ಕಪ್ ಕಡಲೆ ಹಿಟ್ಟು, 1 ಕಪ್ ತುಪ್ಪ, 1 1/2 ಕಪ್ ಸಕ್ಕರೆ, 4 - 5 ಗೋಡಂಬಿ, 2 ಲವಂಗ, 3 - 4 ಏಲಕ್ಕಿ, 5 - 6 ದ್ರಾಕ್ಷಿ

ಮಾಡುವ ವಿಧಾನ: ಕಡಲೆಹಿಟ್ಟನ್ನು ನೀರಿನಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ನಂತರ ಬಾಣಲೆಗೆ ತುಪ್ಪ ಹಾಕಿ ಕಾಯಿಸಿ. ನಂತರ ಲಾಡಿನ ಜರಡಿಯಲ್ಲಿ ಹಿಟ್ಟು ಹಾಕಿ ಕಾದ ತುಪ್ಪಕ್ಕೆ ಬಿಡಬೇಕು. ಬೇರೆ ಬೇರೆ ಕಾಳುಗಳಾಗುತ್ತವೆ. ಅದನ್ನು ತಿರುವಿ ಗರಿಗರಿಯಾದಾಗ ತೆಗೆದಿಡಿ. ನಂತರ ಬಾಣಲೆಯಲ್ಲಿ ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಪಾಕ ಕುದಿದು ನೂಲಿಗೆ ಬರಲಿ. ನಂತರ ಕೆಳಗಿಳಿಸಿ. ದ್ರಾಕ್ಷಿ, ಗೋಡಂಬಿ ಏಲಕ್ಕಿ, ಲವಂಗ ಹಾಕಿ. ಮಾಡಿಟ್ಟ ಕಾಳು ಹಾಕಿ ಚೆನ್ನಾಗಿ ತಿರುವಿ. ಈಗ ಕಡಲೆ ಹಿಟ್ಟಿನ ಮನೋಹರ ಸಿದ್ಧ.

ಕೊತ್ತಂಬರಿ ಸೊಪ್ಪು - Coriander Leaves

ಕೊತ್ತಂಬರಿ ಸೊಪ್ಪಿನ ಪೌಷ್ಟಿಕ ಅಡುಗೆಗಳು

ಕೊತ್ತಂಬರಿ ಸೊಪ್ಪಿನಲ್ಲಿ ಅಧಿಕ ಕಬ್ಬಿಣಾಂಶವಿರುವುದರಿಂದ, ರಕ್ತಹೀನತೆಯಿಂದ ಬಳಲುವವರು ಪ್ರತಿದಿನ ಆಹಾರದಲ್ಲಿ ಇದನ್ನು ಮೂರು ಚಮಚ ಕೊತ್ತಂಬರಿಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಊಟದ ನಂತರ ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಯಾ ಸೊಪ್ಪಿನ ರಸ ಹಾಕಿ ಕುಡಿದರೆ ಆಹಾರವು ಸುಲಭವಾಗಿ ಜೀರ್ಣವಾಗುವುದಲ್ಲದೇ ಹೊಟ್ಟೆಯುಬ್ಬರ ಕಾಡುವುದಿಲ್ಲ.

ಕೊತ್ತಂಬರಿಸೊಪ್ಪಿನ ಸ್ಪೆಷಲ್ ಚಟ್ನಿ



ಬೇಕಾಗುವ ವಸ್ತುಗಳು: 2 ಕಟ್ಟು ಕೊತ್ತಂಬರಿಸೊಪ್ಪು, 2 ಚಮಚ ಉದ್ದಿನಬೇಳೆ, 2 ಚಮಚ ಕಡಲೆ ಬೇಳೆ, 2 ಚಮಚ ಜೀರಿಗೆ, 2 ಚಮಚ ಹುಳಿರಸ, 1/4 ಕಪ್ ಒಣಕೊಬ್ಬರಿ ತುರಿ, 1 ಚಮಚ ಬೆಲ್ಲ, 2 ಚಮಚ ಎಣ್ಣೆ, 3-4 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಕೊತ್ತಂಬರಿಸೊಪ್ಪು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಕೊತ್ತಂಬರಿಸೊಪ್ಪು ಹಾಕಿ ಹುರಿದು, ನಂತರ ಕೆಳಗಿಳಿಸಿ. ನಂತರ ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ ಕೆಂಪುಮೆಣಸು ಹಾಕಿ ಹುರಿದು ಕೆಳಗಿಳಿಸಿ. ನಂತರ ಹುಳಿರಸ, ಉಪ್ಪು, ಬೆಲ್ಲ, ಒಣಕೊಬ್ಬರಿ ತುರಿ, ಹುರಿದ ಮಸಾಲೆ, ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನೀರು ಹಾಕಬಾರದು. ಇದನ್ನು 1 ವಾರ ಹಾಳಾಗದೆ ಇಡಬಹುದು. ಅನ್ನ, ರೊಟ್ಟಿ ಚಪಾತಿ ಜೊತೆ ತಿನ್ನಲು ರುಚಿ.









ಕೊತ್ತಂಬರಿಸೊಪ್ಪಿನ ದೋಸೆ



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/4 ಕಪ್ ತೊಗರಿಬೇಳೆ, 3 ಚಮಚ ಚಿರೋಟಿ ರವೆ, 1 ಕಟ್ಟು ಕೊತ್ತಂಬರಿಸೊಪ್ಪು, 1 ಈರುಳ್ಳಿ, 2 ಹಸಿಮೆಣಸು, 1 ಚಮಚ ಜೀರಿಗೆ, 3 ಚಮಚ ಹುಳಿಮೊಸರು, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿ, ತೊಗರಿಬೇಳೆ, 2-3 ಗಂಟೆ ನೆನೆಸಿ. ನಂತರ ತೊಳೆದು, ಹಸಿಮೆಣಸು, ತೊಳೆದ ಕೊತ್ತಂಬರಿಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ನೀರುಳ್ಳಿ ಚೂರು, ರವೆ, ಮೊಸರು, ಜೀರಿಗೆ ಸೇರಿಸಿ 1/2 ಗಂಟೆ ಇಡಿ. ನಂತರ ಉಪ್ಪು ಸೇರಿಸಿ ದೋಸೆ ಹದಕ್ಕೆ ಕಲಸಿ. ಬಿಸಿಯಾದ ತವಾದ ಮೇಲೆ ಎಣ್ಣೆ ಹಾಕಿ ದೋಸೆ ಹುಯಿದು, 2 ಬದಿ ಬೇಯಿಸಿ ತೆಗೆಯಿರಿ. ಬಿಸಿಯಿರುವಾಗಲೇ ತುಪ್ಪ ಹಾಕಿ ತಿನ್ನಿ.











ಕೊತ್ತಂಬರಿಸೊಪ್ಪಿನ ತಂಬುಳಿ



ಬೇಕಾಗುವ ವಸ್ತುಗಳು: 1 ಕಪ್ ಕೊತ್ತಂಬರಿಸೊಪ್ಪು, 1/2 ಕಪ್ ತೆಂಗಿನತುರಿ, 1-2 ಹಸಿಮೆಣಸು, ಸಿಹಿ ಮಜ್ಜಿಗೆ 3 ಕಪ್, 1/4 ಚಮಚ ಜೀರಿಗೆ, 1/2 ಚಮಚ ತುಪ್ಪ, 1/2 ಒಣಮೆಣಸು, 1/4 ಚಮಚ ಸಾಸಿವೆ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಕೊತ್ತಂಬರಿಸೊಪ್ಪು ಬೇರು ಮತ್ತು ಬಲಿತ ದಂಟು ತೆಗೆದು ಎಳೆಯ ದಂಟು ಮತ್ತು ಸೊಪ್ಪನ್ನು ತೊಳೆದು, ಹಸಿಮೆಣಸು, ಕಾಯಿತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ಉಪ್ಪು ಮತ್ತು ಮಜ್ಜಿಗೆ ಬೆರೆಸಿ, ತುಪ್ಪದಲ್ಲಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಕೊಡಿ.













ಕೊತ್ತಂಬರಿಸೊಪ್ಪಿನ ಭಾತ್



ಬೇಕಾಗುವ ವಸ್ತುಗಳು: 1 ಕಪ್ ತೊಳೆದು ಸಣ್ಣಗೆ ತುಂಡುಮಾಡಿದ ಕೊತ್ತಂಬರಿಸೊಪ್ಪು, 1/2 ಕಪ್ ತೆಂಗಿನತುರಿ, 2 ಕಪ್ ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 1 ಈರುಳ್ಳಿ, 1-2 ಹಸಿಮೆಣಸು, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ, 1 ಕಪ್ ಬೆಳ್ತಿಗೆ ಅನ್ನ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಕೊತ್ತಂಬರಿಸೊಪ್ಪು, 1/2 ನೀರುಳ್ಳಿ ಚೂರು, ಬೆಳ್ಳುಳ್ಲಿ, ಶುಂಠಿ, ತೆಂಗಿನತುರಿ, ಹಸಿಮೆಣಸು ಸೇರಿಸಿ ರುಬ್ಬಿ, ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ, ಸಿಡಿದಾಗ ಉದ್ದಿನಬೇಳೆ ಹಾಕಿ, ಕೆಂಪಾದಾಗ ಉಳಿದ ನೀರುಳ್ಳಿ ಚೂರು ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಸಾಲೆ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿದು, ಮಾಡಿಟ್ಟ ಅನ್ನ ಹಾಕಿ ತೊಳಸಿ. ಉಪ್ಪು ಹಾಕಿ ಬೆರೆಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಕೊತ್ತಂಬರಿಸೊಪ್ಪಿನ ಭಾತ್ ಸವಿಯಲು ಸಿದ್ಧ.

ಪಡುವಲಕಾಯಿ - SNAKE GOURD

ಪಡುವಲಕಾಯಿಯ ರುಚಿಕರ ಅಡುಗೆಗಳು


ಪಡುವಲಕಾಯಿ ಉತ್ತಮ ಪೌಷ್ಟಿಕಾಂಶವುಳ್ಳ ತರಕಾರಿ. ಸಂಧಿವಾತ ಮಧುಮೇಹ, ಕ್ಷಯ - ಈ ರೋಗಗಳಿಂದ ನರಳುವವರಿಗೆ ಪಡುವಲಕಾಯಿ ಔಷಧಿಯುಕ್ತ ಆಹಾರ. ಪಡುವಲಕಾಯಿಯಿಂದ ಪಲ್ಯ, ಕೂಟು, ಮಜ್ಜಿಗೆಹುಳಿ ತಯಾರಿಸಬಹುದು. ಇದನ್ನು ಹೆಚ್ಚು ಹೆಚ್ಚು ಊಟ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುವುದು ಮತ್ತು ಉತ್ತಮ ಪೋಷಕಾಂಶಗಳು ದೇಹಗತವಾಗಿ ದೇಹಾರೋಗ್ಯ ಸುಧಾರಿಸುವುದು.

ಪಡುವಲಕಾಯಿ ಸಿಹಿ ಪಲ್ಯ





ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 1/2 ಚಮಚ ಕೆಂಪುಮೆಣಸಿನ ಪುಡಿ, 1/4 ಕಪ್ ತೆಂಗಿನ ತುರಿ, 1 ಚಮಚ ಬೆಲ್ಲ, 1/2 ಚಮಚ ಸಾಸಿವೆ, 1 ಚಮಚ ಉದ್ದಿನಬೇಳೆ, 1 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ

ಮಾಡುವ ವಿಧಾನ: ಪಡುವಲಕಾಯಿಯನ್ನು ಚೆನ್ನಾಗಿ ತೊಳೆದು, ತಿರುಳು ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ, ಸಿಡಿದಾಗ ಉದ್ದಿನಬೇಳೆ, ಕೆಂಪುಮೆಣಸು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಪಡುವಲಕಾಯಿ ಹಾಕಿ ಸ್ವಲ್ಪ ಹುರಿದು ನಂತರ ಸ್ವಲ್ಪ ನೀರು, ಬೆಲ್ಲ, ಕೆಂಪುಮೆಣಸುಪುಡಿ, ಉಪ್ಪು ಹಾಕಿ ಮುಚ್ಚಿಡಿ. ಬೆಂದು ನೀರು ಆರುತ್ತಾ ಬಂದಾಗ ತೆಂಗಿನ ತುರಿ ಸೇರಿಸಿ ತೊಳಸಿ. ಒಲೆಯಿಂದ ಕೆಳಗಿಳಿಸಿ. ಈ ಪಲ್ಯ ಅನ್ನ, ಗಂಜಿಯೊಂದಿಗೆ ತಿನ್ನಲು ರುಚಿ. ತೆಂಗಿನ ತುರಿ ನುಣ್ಣಗೆ ರುಬ್ಬಿ ಪಲ್ಯಕ್ಕೆ ಹಾಕಿ ತೊಳಸಿದರೆ ಇನ್ನೊಂದು ಬಗೆಯ ಪಲ್ಯ ಸಿದ್ಧ.









ಪಡುವಲ ಜೀರಿಗೆ ಬೆಂದಿ


ಬೇಕಾಗುವ ವಸ್ತುಗಳು: 1 ಕಪ್ ತೊಳೆದು, ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಪಡುವಲಕಾಯಿ, 2 ಕಪ್ ಹಸಿ ತೆಂಗಿನತುರಿ, 1 ಚಮಚ ಬೆಲ್ಲ, 1/2 ಚಮಚ ಜೀರಿಗೆ, 1/4 ಚಮಚ ಕೆಂಪುಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಪಡುವಲಕಾಯಿ ತುಂಡು, ಉಪ್ಪು, ಬೆಲ್ಲ, ಕೆಂಪುಮೆಣಸಿನಪುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಪಡುವಲಕಾಯಿಗೆ ರುಬ್ಬಿದ ಮಿಶ್ರಣ, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಕುದಿಯಲು ಆರಂಭವಾಗುವಾಗಲೇ ಕೆಳಗಿಳಿಸಿ ಸೌಟಿನಿಂದ ತೊಳಸಿ. ಈ ಬೆಂದಿ ಸಾಂಬಾರಿಗಿಂತ ದಪ್ಪವಿರಬೇಕು. ಇದಕ್ಕೆ ಒಗ್ಗರಣೆ ಅಗತ್ಯವಿಲ್ಲ. ಕರಿಬೇವು ಕೂಡಾ ಹಾಕುವುದು ಬೇಡ. ಅನ್ನಕ್ಕೆ ಕಲಸಿ ತಿನ್ನಲು ಈ ಬೆಂದಿ ತುಂಬಾ ರುಚಿ.






ಪಡುವಲಕಾಯಿಯ ರೊಟ್ಟಿ


ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 3/4 ಕಪ್ ಅಕ್ಕಿಹಿಟ್ಟು, 1/4 ಕಪ್ ಗೋಧಿ ಹಿಟ್ಟು, 2 ಚಮಚ ತೆಂಗಿನತುರಿ, 1/2 ಚಮಚ ಜೀರಿಗೆ, 2 ಚಮಚ ಕೊತ್ತಂಬರಿಸೊಪ್ಪು, 1/2 ಚಮಚ ಕೆಂಪುಮೆಣಸು, 1/4 ಚಮಚ ಅರಸಿನಪುಡಿ, 3-4 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:  ಪಡುವಲಕಾಯಿ ತುಂಡುಗಳನ್ನು ಉಗಿಯಲ್ಲಿ ಬೇಯಿಸಿ, ನಂತರ ತೆಂಗಿನತುರಿ ಜೀರಿಗೆ, ಕೊತ್ತಂಬರಿಸೊಪ್ಪು, ಅರಸಿನಪುಡಿ, ಕೆಂಪುಮೆಣಸುಪುಡಿ ಸೇರಿಸಿ, ನುಣ್ಣಗೆ ರುಬ್ಬಿ. ಈ ಮೆಶ್ರಣವನ್ನು ಅಕ್ಕಿಹಿಟ್ಟಿಗೆ ಸೇರಿಸಿ, ಉಪ್ಪು, ಬೇಕಾದರೆ ಸ್ವಲ್ಪ ನೀರು ಹಾಕಿ ಗಟ್ಟಿಗೆ ರೊಟ್ಟಿಹಿಟ್ಟಿನ ಹದಕ್ಕೆ ಕಲಸಿ. ನಂತರ ಉಂಡೆ ಮಾಡಿ, ಬಾಳೆಲೆಯಲ್ಲಿ ತೆಳುವಾಗಿ ತಟ್ಟಿ, ಕಾದ ಕಾವಲಿ ಮೇಲೆ ಕವುಚಿ ಹಾಕಿ. ಬಾಳೆಲೆ ಬಾಡಿದಾಗ ತೆಗೆದು, ಎಣ್ಣೆ ಹಾಕಿ ಮಗುಚಿ ಬೇಯಿಸಿ. ಘಮಘಮಿಸುವ ರೊಟ್ಟಿಯನ್ನು ಬಿಸಿಯಿರುವಾಗಲೇ ತಿನ್ನಲು ರುಚಿಯಾಗಿರುತ್ತದೆ.







ಪಡುವಲಕಾಯಿ ಚಟ್ನಿ


ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 1/2 ಕಪ್ ತೆಂಗಿನತುರಿ, 2-3 ಹಸಿಮೆಣಸು, 1/2 ಚಮಚ ಉದ್ದಿನಬೇಳೆ, 1/4 ಚಮಚ ಕಡಲೆಬೇಳೆ, 1/4 ಚಮಚ ಕೊತ್ತಂಬರಿ, ಚಿಟಿಕಿ ಇಂಗು, 1/4 ಚಮಚ ಹುಳಿರಸ, 1 ಎಸಳು ಕರಿಬೇವಿನೆಲೆ, 1 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:  ಪಡುವಲಕಾಯಿ ಹೋಳು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಿ. ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕೊತ್ತಂಬರಿ, ಕರಿಬೇವಿನೆಲೆ ಸ್ವಲ್ಪ, ಎಣ್ಣೆ ಹಾಕಿ ಹುರಿದು, ಬೇಯಿಸಿದ ಪಡುವಲಕಾಯಿ, ಹಸಿಮೆಣಸು, ಹುಳಿರಸ ಸೇರಿಸಿ ಚಟ್ನಿ ಹದಕ್ಕೆ ರುಬ್ಬಿ. ನಂತರ ಸಾಸಿವೆ, ಕರಿಬೇವು, ಸಣ್ಣತುಂಡು ಕೆಂಪುಮೆಣಸು ಹಾಕಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ. ಈ ಚಟ್ನಿಯು ರೊಟ್ಟಿ, ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ದೀಪಾವಳಿ ವಿಶೇಷ - DEEPAVALI SPECIAL

ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು

ಮತ್ತೆ ದೀಪಾವಳಿ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ, ಈ ಬಾರಿ ವಾಯುಮಾಲಿನ್ಯ, ಶಬ್ದಮಾಲಿನ್ಯಗಳನ್ನುಂಟುಮಾಡುವ ಪಟಾಕಿ ಸುಡುಮದ್ದುಗಳನ್ನು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಮನೋಹ್ಲಾದವುಂಟುಮಾಡುವ ದೀಪಾವಳಿ ಆಚರಿಸೋಣ. ವಾತಾವರಣ ಕಲುಷಿತಗೊಳಿಸದೆ ಹಬ್ಬ ಆಚರಿಸೋಣ.

ಅಕ್ಕಿ ಮುಳ್ಳುಸೌತೆ ಖಾರದ ಕಡ್ಡಿ





ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಹಸಿಮೆಣಸು, 1 ಚಮಚ ಜೀರಿಗೆ, 1/2 ಚಮಚ ಎಳ್ಳು, ಸಣ್ಣ ಗಾತ್ರದ ಒಂದು ಮುಳ್ಳುಸೌತೆ, ರುಚಿಗೆ ತಕ್ಕ ಉಪ್ಪು, 2-3 ಚಮಚ ಅಕ್ಕಿಹಿಟ್ಟು, ಕರಿಯಲು ಬೇಕಾದಷ್ಟು ಎಣ್ಣೆ, 1-2 ಚಮಚ ಬೆಣ್ಣೆ

ಮಾಡುವ ವಿಧಾನ: 2-3 ಗಂಟೆ ನೆನೆಸಿದ ಅಕ್ಕಿ ಚೆನ್ನಾಗಿ ತೊಳೆದು, ಸಿಪ್ಪೆ ತಿರುಳು ತೆಗೆದು, ಸಣ್ಣಗೆ ತುಂಡು ಮಾಡಿದ ಮುಳ್ಳುಸೌತೆ, ಹಸಿಮೆಣಸು, ಜೀರಿಗೆ, ಎಳ್ಳು ಸೇರಿಸಿ ನಯವಾಗಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಹಿಟ್ಟು ಹಾಕಿ, ಹದ ಉರಿಯಲ್ಲಿ ತಿರುಗಿಸುತ್ತಾ ಇರಿ. ಉಪ್ಪು ಹಾಕಿ ಮಿಶ್ರಣ ಗಟ್ಟಿಯಾದ ನಂತರ ಕೆಳಗಿಳಿಸಿ. ಅಕ್ಕಿ ಹಿಟ್ಟು, ಎಣ್ಣೆ ಹಾಕಿ ಚೆನ್ನಾಗಿ ನಾದಿ. ಚಕ್ಕುಲಿ ಮುಟ್ಟಿನ ಖಾರದಕಡ್ಡಿ ಅಚ್ಚಿಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿಯಾದ ಖಾರದ ಕಡ್ಡಿ ಸವಿಯಲು ಸಿದ್ಧ.








ಬೂದುಕುಂಬಳ ಬೋಂಡಾ


ಬೇಕಾಗುವ ವಸ್ತುಗಳು: 1 ಕಪ್ ಉದ್ದಿನಬೇಳೆ, 1/2 ಕಪ್ ಸಣ್ಣಗೆ ಹೆಚ್ಚಿದ ಬೂದುಕುಂಬಳ, 1-2 ಹಸಿಮೆಣಸು, 2 ಚಮಚ ಕೊತ್ತಂಬರಿಸೊಪ್ಪು, 2 ಚಮಚ ಕರಿಬೇವು, 1 ಚಮಚ ಜೀರಿಗೆ, ಚಿಟಿಕಿ ಇಂಗು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಉದ್ದಿನಬೇಳೆಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದು ನಯವಾಗಿ ರುಬ್ಬಿ, ನಂತರ ಸಿಪ್ಪೆ, ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಬೂದುಕುಂಬಳ ತುಂಡು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊತ್ತಂಬರಿಸೊಪ್ಪು, ಕರಿಬೇವು, ಉಪ್ಪು, ಇಂಗು, ಜೀರಿಗೆ ಹಾಕಿ, ರುಬ್ಬಿದ ಉದ್ದಿನಹಿಟ್ಟು ಬೆರೆಸಿ ಸರಿಯಾಗಿ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಬೋಂಡಾ ಸವಿದು ನೋಡಿ.








ಸೋರೆಕಾಯಿ ಕಾಶಿ ಹಲ್ವ


ಬೇಕಾಗುವ ವಸ್ತುಗಳು: 2 ಕಪ್ ಸೋರೆಕಾಯಿ ತುರಿ, 1 ಕಪ್ ಸಕ್ಕರೆ, 1/4 ಕಪ್ ತುಪ್ಪ, 1/4 ಚಮಚ ಏಲಕ್ಕಿ ಪುಡಿ, 7-8 ಗೋಡಂಬಿ, 6-7 ಒಣದ್ರಾಕ್ಷೆ

ಮಾಡುವ ವಿಧಾನ: ಸೋರೆಕಾಯಿಯ ತಿರುಳು ತೆಗೆದು, ದೊಡ್ಡ ಹೋಳುಗಳಾಗಿ ಹೆಚ್ಚಿ ತುರಿಮಣೆಯಲ್ಲಿ ತುರಿದು ಇಡಿ. ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ತುರಿದ ಸೋರೆಕಾಯಿ ಹಾಕಿ ತೊಳಸಿ. ಸೋರೆಕಾಯಿ ತುರಿ ಬೆಂದ ಮೇಲೆ ಸಕ್ಕರೆ ಹಾಕಿ. ಸಕ್ಕರೆ ಕರಗಿ ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತೊಳಸಿ. ಮಿಶ್ರಣ ತಳ ಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಹಾಕಿ ತೊಳಸಿ ಕೆಳಗಿಳಿಸಿ. ಬೌಲ್ ಗೆ ಹಾಕಿ ಸವಿಯಿರಿ.










ಆಲೂ ಬರ್ಫಿ


ಬೇಕಾಗುವ ವಸ್ತುಗಳು: ಬೇಯಿಸಿ ಸಿಪ್ಪೆ ತೆಗೆದು ಮಸೆದ ಆಲೂಗಡ್ಡೆ ಒಂದು ಕಪ್, 1/2 ಕಪ್ ತೆಂಗಿನ ತುರಿ, 1 ಕಪ್ ಸಕ್ಕರೆ, 1/2 ಚಮಚ ಏಲಕ್ಕಿ ಪುಡಿ, 2 ಚಮಚ ತುಪ್ಪ, 1 ಕಪ್ ಹಾಲು

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ತೆಂಗಿನ ತುರಿ ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿದು ಕೆಳಗಿಳಿಸಿ. ನಂತರ ಅದೇ ಬಾಣಲೆಗೆ, ಹಾಲು ಸಕ್ಕರೆ ಹಾಕಿ. ಸಕ್ಕರೆ ಕರಗಿ ನೂಲುಪಾಕವಾದಾಗ, ಹುರಿದಿಟ್ಟ ತೆಂಗಿನತುರಿ ಹಾಕಿ, ಮಸೆದ ಆಲೂ ಹಾಕಿ ಸರಿಯಾಗಿ ತೊಳಸಿ. ಬಾಣಲೆಯಿಂದ ಮಿಶ್ರಣವೆಲ್ಲಾ ಬೆರೆತು ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ತೊಳಸಿ. ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣಿದ ನಂತರ ತುಂಡು ಮಾಡಿ.



ಕಾನಕಲ್ಲಟೆ - Cayratia mollissima

ಕಾನಕಲ್ಲಟೆ ಕಾಯಿಯ ರುಚಿಕರ ಅಡುಗೆಗಳು


ಕಾನಕಲ್ಲಟೆ ಕಾಯಿ ನಮ್ಮೂರಿನ ವಿಶಿಷ್ಟ ತರಕಾರಿ. ಮೊದಲು ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿಯನ್ನು ಮನೆಯ ಹಿತ್ತಲಲ್ಲಿಯೂ ಬೆಳೆಸುತ್ತಾರೆ. ನೀರಿನ ಅನುಕೂಲವಿದ್ದರೆ ವರ್ಷವಿಡೀ ಈ ತರಕಾರಿ ಬೆಳೆಯುತ್ತದೆ. ಗೊಂಚಲು ಗೊಂಚಲಾಗಿ ಬಳ್ಳಿಯಲ್ಲಿ ಬೆಳೆಯುವ ಈ ತರಕಾರಿಯಲ್ಲಿ ಔಷಧೀಯ ಗುಣಗಳಿವೆ. ಈಗಿನ ಯುವಪೀಳಿಗೆಯ ಜನರಿಗೆ ಈ ತರಕಾರಿಯ ಪರಿಚಯವಿರದು. ಮಕ್ಕಳ ಅಜೀರ್ಣ, ಅತಿಸಾರ, ಬೆಳವಣಿಗೆ ಕೊರತೆ, ಕಫದೋಷಗಳಲ್ಲಿ ಒಳ್ಳೆಯದು. ಆಗಾಗ ಬರುವ ಜ್ವರಕ್ಕೂ ಹಿತ. ಈ ಕಾಯಿಯಿಂದ ಸಾಸಿವೆ, ಸಾಂಬಾರು, ಮೆಣಸುಕಾಯಿ ಮಾಡಬಹುದು. ಅದರಲ್ಲೂ ಸೌತೆ ಸೇರಿಸಿ ಮಾಡುವ ಮಜ್ಜಿಗೆ ಹುಳಿಯ ರುಚಿಯಂತೂ ಬಹಳ ಸ್ವಾದಿಷ್ಟವಾಗಿರುತ್ತದೆ.









ಕಾನಕಲ್ಲಟೆ ಕಾಯಿಯ ಮೆಣಸುಕಾಯಿ 




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, ಒಂದುವರೆ ಕಪ್ ತೆಂಗಿನ ತುರಿ, ಸಣ್ಣ ತುಂಡು ಬೆಲ್ಲ, ಸಣ್ಣ ತುಂಡು ಹುಳಿ, 1 ಚಮಚ ಎಳ್ಳು, 1 ಹಸಿಮೆಣಸು, 2 ಒಣಮೆಣಸು, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ, 1 ಎಸಳು ಕರಿಬೇವಿನೆಲೆ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ಕತ್ತರಿಸಿ, ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ. ನಂತರ ಕಾಯಿಯನ್ನು ಕೈಯಲ್ಲಿ ಹಿಸುಕಿ ಒಂದೇ ಒಂದು ಬೀಜ ಉಳಿಯದಂತೆ ಸಂಪೂರ್ಣವಾಗಿ ಬೀಜ ತೆಗೆಯಿರಿ. ಬೀಜ ಉಳಿದರೆ ಬಾಯಿ ಗಂಟಲು ತುರಿಸುತ್ತದೆ. ನಂತರ ಉಪ್ಪು, ಬೆಲ್ಲ, ಹುಳಿ, ಹಸಿಮೆಣಸು, ತುಂಡು ಮಾಡಿದ ಕಾನಕಲ್ಲಟೆ ಕಾಯಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಎಳ್ಳನ್ನು ಎಣ್ಣೆ ಹಾಕದೆ ಹುರಿದು, ಒಣಮೆಣಸು, ಎಣ್ಣೆ ಹಾಕಿ ಹುರಿದು, ತೆಂಗಿನತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಯಿಸಿದ ಕಾನಕಲ್ಲಟೆ ಹೋಳುಗಳಿಗೆ ರುಬ್ಬಿದ ಮಿಶ್ರಣ, ಸಾಕಷ್ಟು ನೀರು ಸೇರಿಸಿ 1 ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಕರಿಬೇವಿನೆಲೆ ಒಗ್ಗರಣೆ ಕೊಡಿ. ಈ ಪದಾರ್ಥ ತುಂಬ ನೀರಾಗಿ  ಇರದೆ ಸ್ವಲ್ಪ ದಪ್ಪವಿರಬೇಕು. ಅನ್ನ ದೋಸೆ ಜೊತೆ ತಿನ್ನಲು ರುಚಿ.




ಕಾನಕಲ್ಲಟೆ ಮಜ್ಜಿಗೆಹುಳಿ (ಮೇಲೋಗರ)




ಬೇಕಾಗುವ ವಸ್ತುಗಳು: 1/2 ಕಪ್ ಸಣ್ಣಗೆ ತುಂಡುಮಾಡಿದ ಮಂಗಳೂರು ಸೌತೆ, 15-20 ಕಾನಕಲ್ಲಟೆಕಾಯಿ, 2 ಕಪ್ ಹಸಿ ತೆಂಗಿನಕಾಯಿಯ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಹಸಿಮೆಣಸು, 1 ಚಿಟಿಕಿ ಅರಸಿನಪುಡಿ, 1 ಕಪ್ ದಪ್ಪ ಸಿಹಿ ಮಜ್ಜಿಗೆ, 1/2 ಕಪ್ ದಪ್ಪ ಹುಳಿಮಜ್ಜಿಗೆ, 1/2 ಚಮಚ ಸಾಸಿವೆ, ರುಚಿಗೆ ತಕ್ಕ ಉಪ್ಪು, 1 ಚಮಚ ತೆಂಗಿನೆಣ್ಣೆ, ಸಣ್ಣ ತುಂಡು ಕೆಂಪುಮೆಣಸು, 1 ಎಸಳು ಕರಿಬೇವಿನೆಲೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕೆ ತುಂಡುಮಾಡಿ ಎರಡು ಹೋಳು ಮಾಡಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ಹದ ಉರಿಯಲ್ಲಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ತುಂಡುಮಾಡಿದ ಸೌತೆ, ಅರಸಿನ ಪುಡಿ, ಉಪ್ಪು, ಕೆಂಪುಮೆಣಸಿನ ಪುಡಿ, ಸೀಳಿದ ಹಸಿಮೆಣಸು ಸೇರಿಸಿ ಪಾತ್ರೆಗೆ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಕಾನಕಲ್ಲಟೆ ಸೌತೆ ಮಿಶ್ರಣಕ್ಕೆ ಸೇರಿಸಿ. ನಂತರ ಸಿಹಿ ಮಜ್ಜಿಗೆ, ಹುಳಿ ಮಜ್ಜಿಗೆ, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಒಂದು ಕುದಿ ಕುದಿಸಿ. ನಂತರ ತೆಂಗಿನೆಣ್ಣೆಯಲ್ಲಿ ಸಾಸಿವೆ ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈ ಮೇಲೋಗರ ಸಾಂಬಾರಿಗಿಂತ ದಪ್ಪವಿರಬೇಕು. ಈ ಮೇಲೋಗರ ಸ್ವಾದಿಷ್ಟವಾಗಿದ್ದು, ಉಣ್ಣಲು ಬಹಳ ರುಚಿಯಾಗಿರುತ್ತದೆ.

ಕಾನಕಲ್ಲಟೆ ಕಾಯಿ ಸಾಸಿವೆ




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, 1 1/2 ಕಪ್ ತೆಂಗಿನ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಒಣಮೆಣಸು, 1/2 ಚಮಚ ಸಾಸಿವೆ, 1/2 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಿಹಿ ಮಜ್ಜಿಗೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ತುಂಡು ಮಾಡಿ. ನಂತರ ಒಲೆಯ ಮೇಲೆ ಹದ ಉರಿಯಲ್ಲಿ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ  ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ಉಪ್ಪು, ಮೆಣಸಿನಪುಡಿ, ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ನಂತರ ಮಜ್ಜಿಗೆ ಹಾಕಿ. ತೆಂಗಿನ ತುರಿಗೆ 1 ಒಣಮೆಣಸು, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿದ ತರಕಾರಿಗೆ ಹಾಕಿ ಸರಿಯಾಗಿ ತೊಳಸಿ, ಬೌಲ್ ಗೆ ಹಾಕಿ. ಒಣಮೆಣಸು ಕರಿಬೇವಿನಿಂದ ಅಲಂಕರಿಸಿ. ಇದನ್ನು ಕುದಿಸುವ ಕ್ರಮವಿಲ್ಲ. ಒಗ್ಗರಣೆಯೂ ಬೇಡ.

ಸೋರೆಕಾಯಿ - Bottle Gourd

ಸೋರೆಕಾಯಿಯ ರುಚಿಕರ ಅಡುಗೆಗಳು

ಸೋರೆಕಾಯಿಯಿಂದ ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ, ದೋಸೆ, ಕಡುಬು ಮುಂತಾದ ಪದಾರ್ಥಗಳನ್ನು ತಯಾರಿಸಬಹುದು. ಬೆಂದ ಸೋರೆಕಾಯಿ ದೇಹಕ್ಕೆ ತಂಪನ್ನುಂಟುಮಾಡುವ ಖಾದ್ಯವಸ್ತು. ಇದು ಗರ್ಭಿಣಿಯರಿಗೆ ಉತ್ತಮ ಆಹಾರ. ಸೋರೆಕಾಯಿಯಿಂದ ತಯಾರಿಸಿದ ಸಾರು ಕ್ಷಯ, ಉನ್ಮಾದ, ಅಧಿಕ ರಕ್ತದೊತ್ತಡ, ಮೂಲವ್ಯಾಧಿ, ಮಧುಮೇಹ, ಕಾಮಾಲೆ, ಜಠರದ ಹುಣ್ಣು ಇತ್ಯಾದಿ ವ್ಯಾಧಿಗಳಿಂದ ನರಳುವ ರೋಗಿಗಳಿಗೆ ಉತ್ತಮ ಆಹಾರ.

ಸೋರೆಕಾಯಿ ಸಿಪ್ಪೆ ಚಟ್ನಿ



ಬೇಕಾಗುವ ವಸ್ತುಗಳು: 1 ಕಪ್ ಸೋರೆಕಾಯಿ ಸಿಪ್ಪೆ, 3/4 ಕಪ್ ತೆಂಗಿನತುರಿ, 2-3 ಎಸಳು ಬೆಳ್ಳುಳ್ಳಿ, 2-3 ಹಸಿಮೆಣಸು, 1/2 ಚಮಚ ಹುಳಿರಸ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಸ್ವಲ್ಪ ಕರಿಬೇವು, 1 ಚಮಚ ಎಣ್ಣೆ

ಮಾಡುವ ವಿಧಾನ: ಸೋರೆಕಾಯಿ ಸಿಪ್ಪೆ, ಉಪ್ಪು, ಹುಳಿ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಿ. ನಂತರ ಬೆಳ್ಳುಳ್ಳಿ ಜಜ್ಜಿ ಸಿಪ್ಪೆ ತೆಗೆದು, ಸ್ವಲ್ಪ ಎಣ್ಣೆ ಹಾಕಿ ಹುರಿದು, ತೆಂಗಿನ ತುರಿ, ಹಸಿಮೆಣಸು, ಹುರಿದ ಬೆಳ್ಳುಳ್ಳಿ, ಬೇಯಿಸಿದ ಸೋರೆಕಾಯಿ ಸಿಪ್ಪೆ ಎಲ್ಲ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು, ಕರಿಬೇವಿನೆಲೆ ಹಾಕಿ ಒಗ್ಗರಣೆ ಕೊಡಿ. ಈ ರುಚಿಯಾದ, ಪೌಷ್ಠಿಕವಾದ ಚಟ್ನಿ ದೋಸೆ, ಚಪಾತಿ, ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.







ಸೋರೆಕಾಯಿ ಸಿಹಿ ಅಪ್ಪ



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ಸೋರೆಕಾಯಿ ತುಂಡು, 1/2 ಕಪ್ ಅವಲಕ್ಕಿ, 1/4 ಚಮಚ ಏಲಕ್ಕಿ ಪುಡಿ, ಚಿಟಿಕಿ ಉಪ್ಪು, 1 ಕಪ್ ಬೆಲ್ಲ, 2-3 ಚಮಚ ತುಪ್ಪ

ಮಾಡುವ ವಿಧಾನ: ಅಕ್ಕಿಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳು ತೆಗೆದು ಸಣ್ಣಗೆ ತುಂಡುಮಾಡಿದ ಸೋರೆಕಾಯಿ, ನೆನೆಸಿಟ್ಟ ಅವಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಲ್ಲ ಉಪ್ಪು ಸೇರಿಸಿ ರುಬ್ಬಬೇಕು. ರುಬ್ಬುವಾಗ ನೀರು ಹಾಕುವ ಅಗತ್ಯವಿದ್ದರೆ ಮಾತ್ರವೇ ನೀರು ಹಾಕಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ತೊಳಸಿ. ನಂತರ ಅಪ್ಪದ ಕಾವಲಿಗೆಯ ಗುಳಿಗೆ ತುಪ್ಪ ಹಾಕಿ ಬಿಸಿಯಾದಾಗ ಹಿಟ್ಟು ಹಾಕಿ, ಬೆಂದು ತಳ ಬಿಟ್ಟಾಗ ಒಂದು ಕಡ್ಡಿಯಿಂದ ಚುಚ್ಚಿ ಕವುಚಿಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆಯಿರಿ. ಈ ಅಪ್ಪ ಸವಿಯಲು ಸ್ವಾದಿಷ್ಟವಾಗಿರುತ್ತದೆ.






ಸೋರೆಕಾಯಿ ಪೋಡಿ



ಬೇಕಾಗುವ ವಸ್ತುಗಳು: ಸಿಪ್ಪೆ ಮತ್ತು ಬೀಜ ತೆಗೆದು ತ್ರಿಕೋನಾಕಾರದಲ್ಲಿ ತುಂಡುಮಾಡಿದ ಸೋರೆಕಾಯಿ 1 ಕಪ್, 1 ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, ಚಿಟಿಕಿ ಇಂಗು, ಉಪ್ಪು ರುಚುಗೆ ತಕ್ಕಷ್ಟು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಇಂಗು, ಉಪ್ಪು, ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗೆ ಕಲಸಿ. ತ್ರಿಕೋನಾಕಾರದಲ್ಲಿ ತುಂಡುಮಾಡಿದ ಸೋರೆಕಾಯಿ ಬಿಲ್ಲೆಗಳನ್ನು ಈ ಮಿಶ್ರಣದಲ್ಲಿ ಅದ್ದಿ ತೆಗೆದು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಈಗ ತಿನ್ನಲು ರುಚಿಯಾದ ಪೋಡಿ ಸಿದ್ಧ.










ಸೋರೆಕಾಯಿ ನಿಪ್ಪಟ್ಟು


ಬೇಕಾಗುವ ವಸ್ತುಗಳು: 1 ಕಪ್ ಅಕ್ಕಿ ಹಿಟ್ಟು, 1 ಕಪ್ ಚಿರೋಟಿ ರವೆ, 2 ಚಮಚ ಹುರಿದ ಶೇಂಗಾ ಬೀಜದ ಪುಡಿ, 2 ಎಸಳು ಕರಿಬೇವು, 2-3 ಹಸಿಮೆಣಸು, 2 ಚಮಚ ಬಿಳಿ ಎಳ್ಳು, ರುಚಿಗೆ ತಕ್ಕ ಉಪ್ಪು, 2 ಚಮಚ ಕೊತ್ತಂಬರಿಸೊಪ್ಪು, 1/2 ಕಪ್ ಸೋರೆಕಾಯಿ ತುರಿ, ಚಿಟಿಕಿ ಇಂಗು

ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಬಿಸಿಮಾಡಿ ಕೆಳಗಿಳಿಸಿ. ಹಸಿಮೆಣಸು, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು ರುಬ್ಬಿ. ಇದಕ್ಕೆ ಅಕ್ಕಿಹಿಟ್ಟು, ಚಿರೋಟಿರವೆ, ಹುರಿದ ಶೇಂಗಾಬೀಜದ ಪುಡಿ, ಬಿಳಿ ಎಳ್ಳು, ಸೋರೆಕಾಯಿ ತುರಿ, ಉಪ್ಪು ಹಾಕಿ ಗಟ್ಟಿಗೆ ಕಲಸಿ. ನಂತರ ಉಂಡೆಮಾಡಿ. ನಂತರ ಎಣ್ಣೆಪಸೆಮಾಡಿದ ಬಾಳೆಲೆಯ ಮೇಲೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿಯಾದ ನಿಪ್ಪಟ್ಟು ಸಂಜೆಯ ಕಾಫಿಯೊಂದಿಗೆ ಸವಿಯಲು ಸಿದ್ಧ.




ಪತ್ರೊಡೆ - PATHRODE

ಪತ್ರೊಡೆಯಲ್ಲಿ ವಿವಿಧ ವೈವಿಧ್ಯ

ಈಗ ಕೆಸುವಿನೆಲೆ ಎಲ್ಲಾ ಕಡೆಯೂ ಧಾರಾಳವಾಗಿ ಸಿಗುತ್ತದೆ. ಪತ್ರೊಡೆಯಲ್ಲಿ ಅನೇಕ ರೀತಿಯ ಬದಲಾವಣೆ ಮಾಡಿ ತಿನ್ನಬಹುದು. ಕೆಸುವಿನೆಲೆಯಲ್ಲಿ ಕಬ್ಬಿಣಾಂಶವಿದೆ. ಉಷ್ಣಗುಣವುಳ್ಳ ಕೆಸುವಿನೆಲೆ ಅಡುಗೆ ಮಾಡುವಾಗ ತಂಪು ಗುಣಗಳುಳ್ಳ ವಸ್ತುಗಳನ್ನು ಉಪಯೋಗಿಸುವುದರಿಂದ ಕೆಸುವಿನ ಉಷ್ಣಗುಣ ಕಡಿಮೆಯಾಗುವುದು.

ಜೀರಿಗೆ ಪತ್ರೊಡೆ ಬೆಂದಿ




ಬೇಕಾಗುವ ವಸ್ತುಗಳು: 2 ಕಪ್ ತೆಂಗಿನತುರಿ, 1 ಒಣಮೆಣಸು, 1 ಚಮಚ ಜೀರಿಗೆ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ, 1/2 ಒಣಮೆಣಸು, 1 ಚಮಚ ಎಣ್ಣೆ, 2 ಕಪ್ ಪತ್ರೊಡೆ ತುಂಡುಗಳು.

ಮಾಡುವ ವಿಧಾನ: ತೆಂಗಿನ ತುರಿಗೆ ಒಂದು ಒಣಮೆಣಸು, ಸ್ವಲ್ಪ ನೀರು ಸೇರಿಸಿ ರುಬ್ಬಿ ತೆಗೆಯಿರಿ. ನಂತರ ದೋಸೆ ಹಿಟ್ಟಿನಷ್ಟು ತೆಳ್ಳಗೆ ಮಾಡಿ ಪಾತ್ರೆಗೆ ಹಾಕಿ ಕುದಿಸಿ. ಉಪ್ಪು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ನಂತರ ತುಂಡುಮಾಡಿದ ಪತ್ರೊಡೆ ಹಾಕಿ ಚೆನ್ನಾಗಿ ತೊಳಸಿ. ಸ್ವಲ್ಪ ಹೊತ್ತಿನ ನಂತರ ತಿಂದರೆ ರುಚಿಯಾಗಿರುತ್ತದೆ.










ಪತ್ರೊಡೆ ಮೊಸರು ಬೆಂದಿ




ಬೇಕಾಗುವ ವಸ್ತುಗಳು: 2 ಕಪ್ ತೆಂಗಿನತುರಿ, 1/2 ಕಪ್ ಮೊಸರು, ರುಚಿಗೆ ತಕ್ಕ ಉಪ್ಪು, 2 ಕಪ್ ಪತ್ರೊಡೆ ತುಂಡುಗಳು, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪು ಮೆಣಸು, 1 ಚಮಚ ಎಣ್ಣೆ

ಮಾಡುವ ವಿಧಾನ: ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸ್ವಲ್ಪ ತೆಳ್ಳಗೆ ಮಾಡಿ ಉಪ್ಪು ಮೊಸರು ಹಾಕಿ, ಸಣ್ಣಗೆ ಹೆಚ್ಚಿದ ಪತ್ರೊಡೆ ಹಾಕಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು ತುಂಡು ಹಾಕಿ ಒಗ್ಗರಣೆ ಕೊಡಿ.










ಪತ್ರೊಡೆ




ಬೇಕಾಗುವ ವಸ್ತುಗಳು: 1ಕಪ್ ಕುಚ್ಚಿಲಕ್ಕಿ, 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ತೆಂಗಿನ ತುರಿ, 1/2 ನಿಂಬೆಗಾತ್ರದ ಹುಳಿ, 1/4 ಅಚ್ಚು ಬೆಲ್ಲ, 3-4 ಕೆಂಪು ಮೆಣಸು, 1/4 ಚಮಚ ಅರಸಿನ, ರುಚಿಗೆ ತಕ್ಕ ಉಪ್ಪು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು 5-6 ಗಂಟೆ ನೆನೆಸಿ ತೆಂಗಿನ ತುರಿ ಜೊತೆಗೆ ಹುಳಿ ಉಪ್ಪು ಬೆಲ್ಲ ಕೊತ್ತಂಬರಿ ಜೀರಿಗೆ ಅರಸಿನ ಸೇರಿಸಿ ನುಣ್ಣಗೆ ರುಬ್ಬಿ. ಅಕ್ಕಿಯನ್ನು ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿ. ರುಬ್ಬುವಾಗು ತೆಂಗಿನ ತುರಿಯ ಮಿಶ್ರಣ ಸೇರಿಸಿ. ಕೆಸುವಿನ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಈ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ನಂತರ ಬಾಡಿಸಿ ತೊಳೆದ ಬಾಳೆಲೆಯಲ್ಲಿ ಕಲಸಿದ ಹಿಟ್ಟು 3 ಸೌಟು  ಹಾಕಿ ಮಡಿಸಿ. ಇಡ್ಲಿ ಪಾತ್ರೆಯಲ್ಲಿ 1 ರಿಂದ 1 1/2 ಗಂಟೆ ಉಗಿಯಲ್ಲಿ ಬೇಯಿಸಿ. ಪತ್ರೊಡೆ ಬಿಸಿಯಿರುವಾಗಲೇ ಕೊಬ್ಬರಿ ಎಣ್ಣೆಯೊಂದಿಗೆ ತಿನ್ನಲು ರುಚಿ.
ಇದರಿಂದ ಮೇಲೆ ಬರೆದ ವಿವಿಧ ಖಾದ್ಯ ತಯಾರಿಸಿ ತಿನ್ನಬಹುದು.






ಪತ್ರೊಡೆ ಸಿಹಿ ಉಸ್ಲಿ




ಬೇಕಾಗುವ ವಸ್ತುಗಳು: 2 ಪತ್ರೊಡೆ, 2 ಕಪ್ ತೆಂಗಿನ ತುರಿ, 4 ಚಮಚ ಎಣ್ಣೆ, 1 ಚಮಚ ಸಾಸಿವೆ, 2 ಚಮಚ ಉದ್ದಿನಬೇಳೆ, 1/4 ಕಪ್ ಬೆಲ್ಲ, 1 ಒಣಮೆಣಸು, 1 ಎಸಳು ಕರಿಬೇವು

ಮಾಡುವ ವಿಧಾನ: ಪತ್ರೊಡೆಯನ್ನು ಸಣ್ಣಗೆ ತುಂಡುಮಾಡಿ ಬೆಲ್ಲ ಪುಡಿಮಾಡಿ ತೆಂಗಿನ ತುರಿಗೆ ಬೆರೆಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು, ಎಣ್ಣೆ ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ ನಂತರ ಒಣಮೆಣಸು, ಕರಿಬೇವು ಹಾಕಿ. ಬೆಲ್ಲ ಬೆರೆಸಿದ ತೆಂಗಿನ ತುರಿಗೆ ಪುಡಿಮಾಡಿದ ಪತ್ರೊಡೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಮೇಲಿನ ಬಾಣಲೆಯಲ್ಲಿದ್ದ ಒಗ್ಗರಣೆಗೆ ಹಾಕಿ ಬಿಸಿಯಾದಾಗ ಕೆಳಗಿಳಿಸಿ. ರುಚಿಯಾದ ಪತ್ರೊಡೆ, ಸಿಹಿ ಉಸ್ಲಿ ತಿನ್ನಲು ಸಿದ್ಧ.








ಅಷ್ಟಮಿ ಲಾಡುಗಳು - Ashtami Laddus

ಅಷ್ಟಮಿ ಹಬ್ಬದ ಲಾಡುಗಳು

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ಕೃಷ್ಣನಿಗೆ ಚಕ್ಕುಲಿ ಕೋಡುಬಳೆ ಲಾಡುಗಳೆಂದರೆ ಪಂಚಪ್ರಾಣ. ಅವನಿಗೆ ಪ್ರಿಯವಾದ ಲಾಡುಗಳನ್ನು ಮಾಡಿ, ನೈವೇದ್ಯ ಮಾಡಿ, ಅವನ ಕೃಪೆಗೆ ಪಾತ್ರರಾಗೋಣ.

ಅವಲಕ್ಕಿ ಲಾಡು



ಬೇಕಾಗುವ ವಸ್ತುಗಳು: 1 ಕಪ್ ಗಟ್ಟಿ ಅವಲಕ್ಕಿ, 1 ಕಪ್ ಸಕ್ಕರೆ ಪುಡಿ, 1/2 ಕಪ್ ಕೊಬ್ಬರಿ ತುರಿ, 1 ಚಮಚ ಏಲಕ್ಕಿ ಪುಡಿ, 1 ಕಪ್ ತುಪ್ಪ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ಅವಲಕ್ಕಿ ಹಾಕಿ, ಕೆಂಪಗೆ ಗರಿಗರಿಯಾಗುವ ತನಕ ಹುರಿದು ಕೆಳಗಿಳಿಸಿ. ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿ. ಇದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಒಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ. ನಂತರ ಬೌಲ್ ಗೆ ಹಾಕಿ. ಬಳಿಕ ತುಪ್ಪ ಸೇರಿಸಿ ಉಂಡೆ ಕಟ್ಟಿ. ಈಗ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಉಂಡೆ ರೆಡಿ.







ಎಳ್ಳುಂಡೆ



ಬೇಕಾಗುವ ವಸ್ತುಗಳು: 1 ಕಪ್ ಬಿಳಿ ಎಳ್ಳು, 3/4 ಕಪ್ ಬೆಲ್ಲ, 2 ಚಮಚ ತುಪ್ಪ

ಮಾಡುವ ವಿಧಾನ: ಎಳ್ಳನ್ನು ಕಲ್ಲು ಮಣ್ಣು ತೆಗೆದು ತೊಳೆದು ಬಿಸಿಲಿನಲ್ಲಿ ಮೊದಲೇ ಒಣಗಿಸಿ ಇಡಿ. ನಂತರ ಬಾಣಲೆಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿಮಾಡಿ. ನಂತರ ಬೆಲ್ಲದ ಪುಡಿ ಏಲಕ್ಕಿ ಪುಡಿ ಹಾಕಿ ಒಂದು ಸುತ್ತು ತಿರುಗಿಸಿ ಬೌಲ್ ಗೆ ಹಾಕಿ. ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ. ಈಗ ರುಚಿಯಾದ ದಿಢೀರ್ ಆಗಿ ಮಾಡುವ ಎಳ್ಳುಂಡೆ ಸವಿಯಲು ಸಿದ್ದ.












ಅರಳುಂಡೆ (ಹೊದಳುಂಡೆ)




ಬೇಕಾಗುವ ವಸ್ತುಗಳು: 1/4 ಕಿಲೋ ಅರಳು, 150 ಗ್ರಾಂ ಬೆಲ್ಲ

ಮಾಡುವ ವಿಧಾನ: ಅರಳನ್ನು ಕುಟ್ಟಿ ಪುಡಿಮಾಡಿ, ಯಾ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ನೀರು, ಬೆಲ್ಲ ಹಾಕಿ ತಿರುಗಿಸಿ. ಬೆಲ್ಲ ಕರಗಿ ನೂಲು ಪಾಕವಾದಾಗ ಒಲೆಯಿಂದ ಇಳಿಸಿ. ಅರಳಿನ ಪುಡಿ ಹಾಕಿ ಸರಿಯಾಗಿ ಮಗುಚಿ. ನಂತರ ಒರಳಿನಲ್ಲಿ ಹಾಕಿ ಕುಟ್ಟಬೇಕು. ಆಮೇಲೆ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. ಈಗ ಸ್ವಾದಿಷ್ಟವಾದ ಲಾಡು ಸಿದ್ಧ.














ರವಾ ಲಾಡು




ಬೇಕಾಗುವ ವಸ್ತುಗಳು: 2 ಕಪ್ ಸಣ್ಣ ರವೆ, 2 ಕಪ್ ಸಕ್ಕರೆ, 1/2 ಕಪ್ ತುಪ್ಪ, 3 ಏಲಕ್ಕಿ, 6-7 ಗೋಡಂಬಿ, 20 ಗ್ರಾಂ ದ್ರಾಕ್ಷಿ, 1/4 ಕಪ್ ಹಾಲು.
ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಸ್ವಲ್ಪ ಕೆಂಪಗೆ ಪರಿಮಳ ಬರುವವರೆಗೆ ರವೆ ಹಾಕಿ ಹುರಿದು ಕೆಳಗಿಳಿಸಿ. ನಂತರ ಸಕ್ಕರೆ ಮಿಕ್ಸಿಯಲ್ಲಿ ಪುಡಿ ಮಾಡಿ, ಹುರಿದ ರವೆಗೆ ಬೆರೆಸಿ. ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಡಂಬಿ ಚೂರು ಎಲ್ಲ ಹಾಕಿ ಚೆನ್ನಾಗಿ ತೊಳಸಿ. ನಂತರ ಹಾಲು ಚಿಮುಕಿಸಿ ಉಂಡೆ ಕಟ್ಟಿ. ಈಗ ರವಾ ಲಾಡು ಕೃಷ್ಣನ ನೈವೇದ್ಯಕ್ಕೆ ಸಿದ್ಧ. ಬೇಕಿದ್ದರೆ ಸ್ವಲ್ಪ ಕೊಬ್ಬರಿ ತುರಿ ಉಂಡೆ ಕಟ್ಟುವಾಗ ಸೇರಿಸಬಹುದು.




ಕಣಿಲೆ - BAMBOO SHOOTS

ಕಣಿಲೆಯ ರುಚಿಕರ ಅಡುಗೆಗಳು

ಈಗ ಮಳೆಗಾಲ. ಈ ಸಮಯದಲ್ಲಿ ಸಿಗುವ ಕಣಿಲೆಯಿಂದ ರುಚಿಕರ ಅಡುಗೆ ಮಾಡಬಹುದು. ಇದು ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ. ತೇವದ ತಂಪಿನ ಹವಾಮಾನಕ್ಕೆ ಹೇಳಿಮಾಡಿಸಿದಂಥ ತರಕಾರಿ. ಆದರೆ ಉಷ್ಣ ಗುಣಉಳ್ಳ ತರಕಾರಿಯಾದ್ದರಿಂದ ಮಿತವಾಗಿ ತಿನ್ನಬೇಕು. ತಾಜಾ ಕಣಿಲೆ ಹಾಗೇ ಬಳಸುವಂತಿಲ್ಲ. ಚಕ್ರಾಕಾರವಾಗಿ ತುಂಡುಮಾಡಿ ನೀರಿನಲ್ಲಿ ಎರಡು ಮೂರು ದಿನ ನೆನೆಸಿ ನಂತರ ಉಪಯೋಗಿಸಿಬೇಕು. ತಾಜಾ ಕಣಿಲೆಯನ್ನು ಕಿತ್ತು ತಂದ ದಿನವೇ ಉಪಯೋಗಿಸಿಬೇಕೆಂದಿದ್ದರೆ ಬೇಯಿಸಿ ನೀರನ್ನು ಚೆಲ್ಲಿ ನಂತರ ಉಪಯೋಗಿಸಿ.

ಕಣಿಲೆ-ಹೆಸರುಕಾಳು ಪಲ್ಯ



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಕಣಿಲೆ, 1/2 ಕಪ್ ಹೆಸರು ಕಾಳು, 1/2 ಚಮಚ ಕೆಂಪುಮೆಣಸಿನ ಪುಡಿ, 1/2 ಚಮಚ ಬೆಲ್ಲ, ಚಿಡಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ,  1 ಎಸಳು ಕರಿಬೇವಿನೆಲೆ, 1/4 ಕಪ್ ತೆಂಗಿನ ತುರಿ, ಸಣ್ಣ ತುಂಡು ಕೆಂಪು ಮೆಣಸು.

ಮಾಡುವ ವಿಧಾನ: ಕಣಿಲೆಯ ಸಿಪ್ಪ ತೆಗೆದು ಚಕ್ರಾಕಾರವಾಗಿ ಕತ್ತರಿಸಿ ನೀರಿಗೆ ಹಾಕಿ. ಮಾರನೆ ದಿನ ನೀರು ಚೆಲ್ಲಿ, ಕಣಿಲೆ ಸಣ್ಣಗೆ ಹೆಚ್ಚಿ ಒಂದು ಪಾತ್ರೆಯಲ್ಲಿ 3 ಕಪ್ ನೀರು ಹಾಕಿ ಕುದಿಸಿ. ಹೆಚ್ಚಿದ ಕಣಿಲೆ ಸೇರಿಸಿ ಬೇಯಿಸಿ. ನೀರು ಚೆಲ್ಲಿ. ಹೆಸರುಕಾಳು ನೆನೆಸಿ ತೊಳೆದು ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ,  ಉದ್ದಿನಬೇಳೆ, ಕರಿಬೇವಿನೆಲೆ, ಕೆಂಪು ಮೆಣಸು ಹಾಕಿ ನಂತರ ಒಗ್ಗರಣೆ ಸಿಡಿದಾಗ ಬೇಯಿಸಿದ ಕಣಿಲೆ, ಬೇಯಿಸಿದ ಹೆಸರುಕಾಳು, ಸ್ವಲ್ಪ ನೀರು, ಕೆಂಪುಮೆಣಸಿನ ಪುಡಿ, ಬೆಲ್ಲ, ಅರಸಿನ, ಉಪ್ಪು ಸೇರಿಸಿ ಮುಚ್ಚಿಡಿ. ನೀರೆಲ್ಲಾ ಆರಿದ ಮೇಲೆ ಕಾಯಿತುರಿ ಹಾಕಿ ಸ್ವಲ್ಪ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಕರವಾದ ಕಣಿಲೆ ಪಲ್ಯ ಊಟದೊಂದಿಗೆ ಸವಿಯಲು ಸಿದ್ಧ.





ಕಣಿಲೆ ಗಸಿ



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಕಣಿಲೆ, 1/2 ಕಪ್ ತೊಗರಿಬೇಳೆ, 1 ಚಮಚ ಕೊತ್ತಂಬರಿ, 1 ಚಮಚ ಉದ್ದಿನಬೇಳೆ, 1/4 ಚಮಚ ಮೆಂತೆ, 1/4 ಚಮಚ ಜೀರಿಗೆ, 1/2 ಚಮಚ ಹುಳಿರಸ, 1/2 ಚಮಚ ಬೆಲ್ಲ, 1/4 ಕೆಂಪುಮೆಣಸು ಪುಡಿ, 4-5 ಒಣಮೆಣಸು, ಚಿಟಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಎಸಳು ಕರಿಬೇವಿನೆಲೆ, ಸಣ್ಣ ತುಂಡು ಕೆಂಪುಮೆಣಸು, 2 ಕಪ್ ತೆಂಗಿನತುರಿ.

ಮಾಡುವ ವಿಧಾನ: ಮೇಲಿನಂತೆ ನೀರಲ್ಲಿ ಹಾಕಿದ ಕಣಿಲೆಯನ್ನು ಮಾರನೆ ದಿನ ನೀರು ಚೆಲ್ಲಿ ಸಣ್ಣಗೆ ಹೆಚ್ಚಿ, ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ, ಹೆಚ್ಚಿದ ಕಣಿಲೆ ಸೇರಿಸಿ ಬೇಯಿಸಿ ನೀರು ಚೆಲ್ಲಿ. ತೊಗರಿಬೇಳೆ ಬೇಯಿಸಿ ನಂತರ ಕಣಿಲೆ ತುಂಡಿಗೆ ಉಪ್ಪು ಮೆಣಸಿನಪುಡಿ, ಬೆಲ್ಲ, ಸ್ವಲ್ಪ ಹುಳಿ, ನೀರು ಸೇರಿಸಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬೆಸಿಯಾದಾಗ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು ಅರಸಿನ ಸೇರಿಸಿ. ಉದ್ದಿನಬೇಳೆ ಕೆಂಪಗಾಗುವಂತೆ ಹುರಿಯಿರಿ. ತೆಂಗಿನ ತುರಿ, ಹುರಿದ ಮಸಾಲೆ, ಸ್ವಲ್ಪ ನೀರು ಸೇರಿಸಿ ರುಬ್ಬಿ.  ಬೆಂದ ಕಣಿಲೆಗೆ ರುಬ್ಬಿದ ಮಸಾಲೆ, ಬೇಯಿಸಿದ ತೊಗರಿಬೇಳೆ, ಸಾಕಷ್ಟು ನೀರು ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಘಮಘಮಿಸುವ ಕಣಿಲೆ ಗಸಿ ಚಪಾತಿ, ಅನ್ನ, ರೊಟ್ಟಿಯೊಂದಿಗೆ ಸೇವಿಸಲು ರುಚಿಯಾಗಿರುತ್ತದೆ.





ಕಣಿಲೆ ಉಪ್ಪಿನಕಾಯಿ




ಬೇಕಾಗುವ ವಸ್ತುಗಳು: 1 ಕಪ್ ಕಣಿಲೆ ಹೋಳು, 1 ಕಪ್ ಬೇಯಿಸಿದ ಲಿಂಬೆ ಹೋಳು ಅಥವಾ ಉಪ್ಪು ಬೆರೆಸಿದ ಹಸಿ ಅಂಬಟೆ ಹೋಳು, 3/4 ಚಮಚ ಅರಸಿನ ಪುಡಿ, 1/2 ಕಪ್ ಸಾಸಿವೆ, 2 ಕಪ್ ಉಪ್ಪಿನಕಾಯಿ ಮೆಣಸು, 1/2 ಹಿಡಿ ಉಪ್ಪು, ಸ್ವಲ್ಪ ಇಂಗು

ಮಾಡುವ ವಿಧಾನ: ಎಳೆಯ ಕಣಿಲೆಯನ್ನು 1/2 ಅಂಗುಲ ಹೋಳುಗಳನ್ನಾಗಿ ಹೆಚ್ಚಿ, ನೀರಲ್ಲಿ ಹಾಕಿಡಿ. ಮೂರನೇ ದಿನ ನೀರು ಬಸಿದು ತೊಳೆದು ಬೇರೆ 1/2 ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ ನೀರು ಬಸಿಯಿರಿ. ಈ ಹೋಳಿಗೆ, ಉಪ್ಪು, 2 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ, ಹೋಳನ್ನು ಆರಿಸಿ ತೆಗೆದು ಆರಲು ಬಿಡಿ. ಉಪ್ಪುನೀರಲ್ಲಿ ಮೆಣಸು, ಸಾಸಿವೆ, ಇಂಗು, ಅರಸಿನಪುಡಿ ಸೇರಿಸಿ ನುಣ್ಣಗೆ ರುಬ್ಬಿ. ಆರಿದ ಕಣಿಲೆ ಹೋಳಿಗೆ ಬೆರೆಸಿ ಬಾಟಲಿಗೆ ಹಾಕಿ ಭದ್ರವಾಗಿ ಮುಚ್ಚಿ. ಬಾಟಲಿಗೆ ಹಾಉವ ಮೊದಲು, ಬೇಯಿಸಿದ ಲಿಂಬೆ ಹೋಳು ಯಾ ಹಸಿ ಅಂಬಟೆ ಹೋಳು ಹಾಕಿ ಸರಿಯಾಗಿ ಬೆರೆಸಿ. ಈ ಉಪ್ಪಿನಕಾಯಿ ಗಂಜಿ, ಅನ್ನದೊಂದಿಗೆ ಸವಿಯಲು ಚೆನ್ನ.


ಹಲಸಿನ ಹಣ್ಣು - Jack Fruit

ಹಲಸಿನ ಹಣ್ಣಿನ ರುಚಿಕರ ಅಡುಗೆಗಳು

ಈಗ ಹಲಸಿನ ಹಣ್ಣು ಧಾರಾಳವಾಗಿ ಸಿಗುವ ಸಮಯ. "ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು" ಎಂಬ ಮಾತಿದೆ. ಹಣ್ಣಿನಲ್ಲಿ ವಿವಿಧ ಪೋಷಕಾಂಶಗಳೂ ಇವೆ. ಆದರೆ ಮಿತವಾಗಿ ತಿನ್ನಬೇಕು.

ಹಲಸಿನ ಹಣ್ಣಿನ ಕೊಟ್ಟಿಗೆ (ಕಡುಬು)



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ಸಣ್ಣಗೆ ಹೆಚ್ಚಿದ ಹಲಸಿನ ಸೊಳೆ, 1/4 ಕಪ್ ಬೆಲ್ಲ, 4 ಚಮಚ ತೆಂಗಿನ ತುರಿ, ರುಚಿಗೆ ತಕ್ಕ ಉಪ್ಪು, 5-6 ಬಾಳೆಲೆ ತುಂಡು.

ಮಾಡುವ ವಿಧಾನ: ಬೆಳ್ತಿಗೆ 2-3 ಗಂಟೆ ನೆನೆಸಿ, ನಂತರ ತೊಳೆದು, ಸ್ವಲ್ಪ ನೀರು, ಉಪ್ಪು ಹಾಕಿ ಗಟ್ಟಿಗೆ ರುಬ್ಬಿ. ಒಲೆಯ ಮೇಲೆ ಇಡ್ಲಿ ಪಾತ್ರೆ ಇಟ್ಟು ನೀರು ಕುದಿಯಲಿಕ್ಕಿಡಿ. ನಂತರ ಸಣ್ಣಗೆ ಹೆಚ್ಚಿದ ಹಲಸಿನ ಸೊಳೆಗೆ ಪುಡಿ ಮಾಡಿದ ಬೆಲ್ಲ, ಕಾಯಿತುರಿ ಎಲ್ಲ ಹಾಕಿ ಬೆರೆಸಿ. ನಂತರ ಬಾಡಿಸಿದ ಬಾಳೆಲೆಯಲ್ಲಿ 2 ಸೌಟು ರುಬ್ಬಿದ ಅಕ್ಕಿಗೆ ಬೆರೆಸಿದ ಹಲಸಿನ ಹಣ್ಣಿನ ಮಿಶ್ರಣ ಹಾಕಿ ಮಡಚಿ. 3/4 ರಿಂದ 1 ಗಂಟೆ ತನಕ ಬೇಯಿಸಿ. ಬೇಯಿಸಿದ ಈ ಕೊಟ್ಟಿಗೆ ತಣಿದ ನಂತರ ತೆಂಗಿನೆಣ್ಣೆ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.





ಹಲಸಿನ ಹಣ್ಣಿನ ಶ್ಯಾವಿಗೆ (ಸೇಮಿಗೆ)



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/4 ಕಪ್ ಸಣ್ಣಗೆ ತುಂಡರಿಸಿದ ಹಲಸಿನ ಹಣ್ಣು, 3-4 ಚಮಚ ಬೆಲ್ಲ, 4 ಚಮಚ ಕಾಯಿತುರಿ, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆಸಿ, ನಂತರ ತೊಳೆದು ಸ್ವಲ್ಪ ನೀರು, ಉಪ್ಪು, ಹಲಸಿನ ಹಣ್ಣಿನ ಚೂರು, ಬೆಲ್ಲ, ಕಾಯಿತುರಿ ಸೇರಿಸಿ, ನುಣ್ಣಗೆ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದಾಗ ರುಬ್ಬಿದ ಹಿಟ್ಟು ಹಾಕಿ ಉಂಡೆ ಕಟ್ಟಲು ಬರುವಷ್ಟು ಹದಕ್ಕೆ ತೊಳಸಿ. ನಂತರ ಉಂಡೆ ಮಾಡಿ ಉಗಿಯಲ್ಲಿ 15-20 ನಿಮಿಷ ಬೇಯಿಸಿ. ನಂತರ ಬಿಸಿಯಿರುವಾಗಲೇ, ಸೇಮಿಗೆ ಮುಟ್ಟಿನಲ್ಲಿ ಒತ್ತಿ. ಈಗ ರುಚಿಯಾದ ಸೇಮಿಗೆ ತಿನ್ನಲು ಸಿದ್ಧ. ಇದನ್ನು ಹಾಗೆಯೇ ತಿನ್ನಬಹುದು ಯಾ ಉಪ್ಪುಕರಿ ಮಾಡಿ ತಿನ್ನಬಹುದು.









ಹಲಸಿನ ಹಣ್ಣು ಬೆರಟಿ ಪಾಯಸ



ಬೇಕಾಗುವ ವಸ್ತುಗಳು: 1 ಕಪ್  ಹಲಸಿನ ಹಣ್ಣು ಬೆರಟಿ, 2 ಕಪ್ ಹಸಿ ತೆಂಗಿನ ತುರಿ, 1/2 ಚಮಚ ಏಲಕ್ಕಿ ಪುಡಿ, 1 ಕಪ್ ಬೆಲ್ಲ

ಮಾಡುವ ವಿಧಾನ: ತೆಂಗಿನ ತುರಿ ರುಬ್ಬಿ, ನೀರು ಕಾಯಿಹಾಲು, ಮಂದ ಕಾಯಿಹಾಲು ತೆಗೆದಿಡಬೇಕು. ಬೆರಟಿಯನ್ನು ನೀರುಕಾಯಿಹಾಲು ಸೇರಿಸಿ ಸ್ವಲ್ಪ ಹೊತ್ತು ಇರಿಸಿ. ಬೆರಟಿ ಕರಗಿದ ನಂತರ, ಬೆಲ್ಲ, ಮಂದಕಾಯಿಹಾಲು ಸೇರಿಸಿ ಕುದಿಸಿ. ನಂತರ ಇಳಿಸಲಿಕ್ಕಾಗುವಾಗ ಏಲಕ್ಕಿಪುಡಿ, ಕೊಬ್ಬರಿ ಚೂರು ಹಾಕಬೇಕು. ಘಮಘಮಿಸುವ ರುಚಿಯಾದ ಪಾಯಸ, ಸವಿದಷ್ಟೂ ಸವಿಯಬೇಕೆನಿಸುತ್ತದೆ.





ಬೆರಟಿ ತಯಾರಿಸುವ ಕ್ರಮ: ಹಲಸಿನ ಹಣ್ಣು ಸಿಗುವ ಕಾಲದಲ್ಲಿ ಅದನ್ನು ಬಿಡಿಸಿ ಸಣ್ಣಗೆ ತುಂಡುಮಾಡಿ ಬಾಣಲೆಗೆ ಹಾಕಿ ಕಾಯಿಸಿ. ಹಣ್ಣು ಬೆಂದ ನಂತರ ಅಷ್ಟೇ ಪ್ರಮಾಣದ ಬೆಲ್ಲ ಸೇರಿಸಿ - ಉಂಡೆ ಮಾಡುವ ಹದಕ್ಕೆ ಪಾಕ ಗಟ್ಟಿಯಾಗಲಿ. ಆರಿದ ಮೇಲೆ ಉಂಡೆ ಕಟ್ಟಿ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಡಬ್ಬದಲ್ಲಿ ಇಟ್ಟರೆ ವರ್ಷವಾದರೂ ಕೆಡದು. ಬೇಕಾದಾಗ ತೆಗೆದು ಪಾಯಸ ಮಾಡಿಕೊಳ್ಳಬಹುದು. ಇದು ತಿನ್ನಲೂ ಬಲು ರುಚಿ.




ವಿ.ಸೂ: ಹಲಸಿನ ಹಣ್ಣಿನ ಕಡುಬು, ಅಪ್ಪ, ಪಾಯಸ, ಗೆಣಸಲೆ ಮುಂತಾದ ಸಿಹಿತಿಂಡಿ ಮಾಡುವಾಗ ಹಣ್ಣಿನ ಸಿಹಿ ಗುಣ ನೋಡಿಕೊಂಡು ಬೆಲ್ಲ ಹಾಕಬೇಕು. 

ಹಲಸು - JACK FRUIT

ಬೆಳೆದ ಹಲಸಿನಕಾಯಿಯ ರುಚಿಕರ ಅಡುಗೆಗಳು


ಹಲಸು ಎಲ್ಲರಿಗೂ ಪ್ರಿಯವಾಗುವ ಹಣ್ಣು. ಅದರಿಂದ ವಿವಿಧ ಅಡುಗೆಗಳನ್ನು ತಯಾರಿಸಬಹುದು. ಎಳೆ ಕಾಯಿಯಿಂದ ಹಿಡಿದು ಹಣ್ಣಿನವರೆಗೂ, ಪ್ರತಿಯೊಂದು ಹಂತದಲ್ಲೂ ಅಡುಗೆ ತಯಾರಿಸಬಹುದು. ಈಗಂತೂ ಎಲ್ಲಾಕಡೆ ಹಲಸಿನ ಮೇಳ ಕಂಡುಬರುತ್ತಿದೆ. ದೇಹಕ್ಕೆ ಬೇಕಾದ ಪೋಶಕಾಂಶಗಳು ಹಲಸಿನಲ್ಲಿವೆ. ಆದರೆ ಹದವಾಗಿ ತಿನ್ನಬೇಕು.



ಹಲಸು ಮಾವು ಬೆಂದಿ



ಬೇಕಾಗುವ ವಸ್ತುಗಳು: 1 ಕಪ್ ಹಲಸಿನ ಸೊಳೆ, 1 ಕಾಡು ಮಾವು, 2 ಕಪ್ ತೆಂಗಿನ ತುರಿ, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, 3-4 ಕೆಂಪು ಮೆಣಸು, ಚಿಟಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1 ಎಸಳು ಕರಿಬೇವಿನೆಲೆ, 1 ಚಮಚ ಎಣ್ಣೆ, 1/4 ಚಮಚ ಕೆಂಪು ಮೆಣಸು ಪುಡಿ

ಮಾಡುವ ವಿಧಾನ: ಹಲಸಿನ ಸೊಳೆ, ಸ್ವಲ್ಪ ನೀರು, ಕೆಂಪುಮೆಣಸಿನ ಪುಡಿ, ಉಪ್ಪು ಸೇರಿಸಿ ಪಾತ್ರೆಗೆ ಹಾಕಿ ಬೇಯಿಸಿ. ಬೇಯುತ್ತಾ ಬಂದಾಗ ಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು ಎರಡು ಬದಿ ಹೆಚ್ಚಿ ಸೇರಿಸಿ. ಜೀರಿಗೆ, ಕೊತ್ತಂಬರಿ, ಕೆಂಪುಮೆಣಸು, ಎಣ್ಣೆ ಹಾಕಿ ಹುರಿದು, ಅರಸಿನ ಸೇರಿಸಿ ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೆಂದ ತರಕಾರಿಗೆ ಸೇರಿಸಿ. ಸಾಕಷ್ಟು ನೀರು ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆ ಒಗ್ಗರಣೆ ಕೊಡಿ. ಈ ಬೆಂದಿ ಸ್ವಲ್ಪ ದಪ್ಪಗಿದ್ದರೆ ರುಚಿ ಜಾಸ್ತಿ. ಗಂಜಿಯೊಂದಿಗೆ ಸವಿಯಲು ಬಹಳ ರುಚಿ.









ಹಲಸಿನ ಗರಂ ಕೂರ್ಮ



ಬೇಕಾಗುವ ವಸ್ತುಗಳು: 1 ಕಪ್ ಹಲಸಿನ ಸೊಳೆ, 1/4 ಕಪ್ ನೀರುಳ್ಳಿ, 1 ಚಮಚ ಶುಂಠಿ, 3-4 ಬೀಜ ಬೆಳ್ಳುಳ್ಳಿ, 2 ಲವಂಗ, ಸಣ್ಣ ತುಂಡು ಚೆಕ್ಕೆ, 3-4 ಕೆಂಪುಮೆಣಸು,  1/4 ಕಪ್ ಕೊತ್ತಂಬರಿಸೊಪ್ಪು, 1/4 ಕಪ್ ಕಾಯಿತುರಿ, ಎರಡು ಚಮಚ ಎಣ್ಣೆ, 1/4 ಚಮಚ ಅರಸಿನ ಪುಡಿ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಹಲಸಿನ ಸೊಳೆ, ಸ್ವಲ್ಪ ನೀರು, ಮತ್ತು ಉಪ್ಪು ಸೇರಿಸಿ ಪಾತ್ರೆಗೆ ಹಾಕಿ ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಅನುಕ್ರಮವಾಗಿ, ನೀರುಳ್ಳಿ ಚೂರು, ಶುಂಠಿ ಚೂರು, ಬೆಳ್ಳುಳ್ಳಿ ಬೀಜ, ಲವಂಗ, ಚೆಕ್ಕೆ, ಕೆಂಪುಮೆಣಸು, ಕೊತ್ತಂಬರಿಸೊಪ್ಪು ಹಾಕಿ ಹುರಿದು, ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೆಂದ ಹಲಸಿನ ಸೊಳೆಗೆ ಸೇರಿಸಿ. ಅರಸಿನ ಪುಡಿ ಸೇರಿಸಿ. ಸ್ವಲ್ಪ ನೀರು ಸೇರಿಸಿ ಕುದಿಸಿ. ರಸ ಸಮರಸವಾದಾಗ ಒಲೆಯಿಂದ ಇಳಿಸಿ. ಪೂರಿಗೆ, ಚಪಾತಿಗೆ, ಅನ್ನದ ಜೊತೆಗೂ ರುಚಿ.









ಹಲಸಿನಕಾಯಿ ಮಜ್ಜಿಗೆ ಹುಳಿ (ಮೇಲೋಗರ)



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ತುಂಡುಮಾಡಿದ ಹಲಸಿನಕಾಯಿ, 2 ಕಪ್ ತೆಂಗಿನ ತುರಿ, 1/2 ಕಪ್ ಹುಳಿ ಮಜ್ಜಿಗೆ, 1 ಚಮಚ ಕೆಂಪು ಮೆಣಸಿನ ಪುಡಿ, 1 ಹಸಿಮೆಣಸು, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1/4 ಚಮಚ ಮೆಂತೆ, 1 ಎಸಳು ಕರಿಬೇವು, 1 ಒಣಮೆಣಸು, 1 ಚಮಚ ಎಣ್ಣೆ

ಮಾಡುವ ವಿಧಾನ: ಹಲಸಿನಕಾಯಿ ತುಂಡು, ಉಪ್ಪು, ಕೆಂಪುಮೆಣಸಿನ ಪುಡಿ, ಹಸಿಮೆಣಸು, ಸ್ವಲ್ಪ ನೀರು ಸೇರಿಸಿ ಪಾತ್ರೆಯಲ್ಲಿಟ್ಟು ಬೇಯಿಸಿ. ತೆಂಗಿನ ರುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ತರಕಾರಿಗೆ ಸೇರಿಸಿ, ನಂತರ ಮಜ್ಜಿಗೆ ಸೇರಿಸಿ, ಸಾಕಷ್ಟು ನೀರು ಸೇರಿಸಿ ಒಂದು ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ, ಸಾಸಿವೆ, ಮೆಂತೆ, ಒಣಮೆಣಸು ಚೂರು, ಕರಿಬೇವಿನೆಲೆ ಹಾಕಿ ಒಗ್ಗರಣೆ ಕೊಡಿ. ಸಾಂಬಾರಿಗಿಂತ ಮಜ್ಜಿಗೆ ಹುಳಿ ದಪ್ಪಗಿರಬೇಕು. ರುಬ್ಬುವಾಗ ಹಸಿಕಾಯಿ (ತುಂಬ ಒಣಗದ ಎಳೆ ಕಾಯಿ) ತುರಿ ಹಾಕಬೇಕು.



ಕಾಡು ಮಾವಿನ ಹಣ್ಣು - Wild Mango

ಕಾಡು ಮಾವಿನ ಹಣ್ಣಿನ ರುಚಿಕರ ಅಡುಗೆಗಳು

ಈಗ ಕಾಡು ಮಾವು ಧಾರಾಳವಾಗಿ ಸಿಗುವ ಕಾಲ. ಮಾವುನಲ್ಲಿ "ಸಿ" "ಬಿ" ಜೀವಸತ್ವ ಹೇರಳವಾಗಿದೆ. ಕಸಿ ಮಾವು ಜಾಸ್ತಿ ತಿಂದರೆ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಕಾಡು ಮಾವು ತಿಂದಷ್ಟೂ ಹಸಿವು ಜಾಸ್ತಿ. ಈಗೀಗ ಕಾಡುಮಾವಿನ ಸಂತತಿ ಕಡಿಮೆಯಾಗುತ್ತಿದೆ. ಈ ಮಾವಿನ ಗೊಜ್ಜು ಪಲ್ಯ ತಿಂದಾಗ, ಅದರ ಗೊರಟನ್ನು ಚೀಪಿದಾಗ ಆಗುವ ತೃಪ್ತಿ ಬೇರೆ ಮಾವಿನಲ್ಲಿ ಸಿಗದು. ಉಪ್ಪಿನಕಾಯಿಗೆ, ಮಾಂಬಳಕ್ಕೆ ಕಾಡು ಮಾವೇ ಸೂಕ್ತ. ಮುಂದಿನ ಪೀಳಿಗೆಗೆ ಕಾಡು ಮಾವಿನ ವಿಶೇಷತೆಯ ಅರಿವು ಮೂಡಿಸಬೇಕಿದೆ. ಆದಷ್ಟು ಮರ ಕಡಿಯದೆ ಅದರ ಸಂತತಿ ಉಳಿಸಲು ಪ್ರಯತ್ನಿಸೋಣ.

ಕಾಡು ಮಾವಿನ ಹಣ್ಣಿನ ಪಾಯಸ

ಬೇಕಾಗುವ ವಸ್ತುಗಳು: 5-6 ಕಾಡುಮಾವಿನ ಹಣ್ಣು, 4-5 ಅಚ್ಚುಬೆಲ್ಲ, 3 ಕಪ್ ತೆಂಗಿನ ತುರಿ, 2-3 ಚಮಚ ಅಕ್ಕಿ ಹಿಟ್ಟು, ಚಿಟಿಕಿ ಉಪ್ಪು.

ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು ಸುಲಿಯಿರಿ. ಗೊರಟಿನಿಂದ ರಸವನ್ನು ಕಿವುಚಿ ಹಿಂಡಿಕೊಳ್ಳಿ. ಕಾಯಿ ತುರಿದು ರುಬ್ಬಿ ದಪ್ಪ ಹಾಲು ಹಿಂಡಿ ಬೇರೆ ಇಡಿ. ಮತ್ತೆರಡು ಬಾರಿ ಹಿಂಡಿದ ಹಾಲನ್ನು ಮಾವಿನ ರಸಕ್ಕೆ ಬೆರೆಸಿ. ನಂತರ ಒಲೆಯ ಮೇಲಿಟ್ಟು ಉಪ್ಪು ಬೆಲ್ಲ ಹಾಕಿ ಕುದಿಸಿ. 5-10 ನಿಮಿಷ ಕುದಿದ ನಂತರ ಅಕ್ಕಿ ಹಿಟ್ಟು ನೀರಲ್ಲಿ ಕದಡಿ, ಪಾಯಸ ದಪ್ಪವಾಗುವುದಕ್ಕೆ ಬೇಕಾದಷ್ಟು ಅಕ್ಕಿ ಹಿಟ್ಟು ಪಾಯಸಕ್ಕೆ ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಮೊಗಚುತ್ತಾ ಇರಬೇಕು. ನಂತರ ದಪ್ಪ ಹಾಲು ಹಾಕಿ ಒಂದು ಕುದಿ ಕುದಿಸಿ ಒಲೆಯಿಂದ ಇಳಿಸಿ. ಮಾವಿನಹಣ್ಣಿನ ಹುಳಿ ನೋಡಿಕೊಂಡು ಬೆಲ್ಲ ಹಾಕಬೇಕು. ಅಕ್ಕಿ ಹಿಟ್ಟಿನ ಬದಲು ಅಕ್ಕಿ ನೆನೆಸಿ ರುಬ್ಬಿಯೂ ಹಾಕಬಹುದು. ರುಚಿಯಾದ ಈ ಪಾಯಸ ತಿಂದಷ್ಟೂ ತಿನ್ನಬೇಕೆನಿಸುತ್ತದೆ.







ಕಾಡು ಮಾವಿನ ಹಣ್ಣಿನ ತೊಕ್ಕು


ಬೇಕಾಗುವ ವಸ್ತುಗಳು: 9-10 ಕಾಡು ಮಾವಿನ ಹಣ್ಣು, 2 ಚಮಚ ಕೆಂಪು ಮೆಣಸಿನ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು

ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು, ಸುಲಿದು, ಕಿವುಚಿ, ದಪ್ಪ ತಳದ ಬಾಣಲೆಗೆ  ಹಿಂಡಿ. ಉಪ್ಪು ಮತ್ತು ಕೆಂಪುಮೆಣಸಿನ ಪುಡಿ ಸೇರಿಸಿ ಒಲೆಯ  ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಇಳಿಸಿ. 2-3 ತಿಂಗಳು ಇದು ಹಾಳಾಗದು. ಅನ್ನದ ಜೊತೆ ಹೆಚ್ಚಿದ ಈರುಳ್ಳಿ, ಎಣ್ಣೆ ಹಾಕಿ ತಿಂದರೆ ಇದು ಬಲು ರುಚಿ.











ಮಾವಿನ ಹಣ್ಣಿನ ಗಸಿ


ಬೇಕಾಗುವ ವಸ್ತುಗಳು: 7-8 ಕಾದುಮಾವಿನ ಹಣ್ಣು, 2 ಕಪ್ ತೆಂಗಿನ ತುರಿ, 5-6 ಹುರಿದ ಒಣಮೆಣಸು, 1 ಚಮಚ ಉದ್ದಿನಬೇಳೆ, 2 ಚಮಚ ಕೊತ್ತಂಬರಿ, 1/2 ಚಮಚ ಸಾಸಿವೆ, 4-5 ಚಮಚ ಬೆಲ್ಲ, 1 ಎಸಳು ಕರಿಬೇವಿನೆಲೆ, 2 ಚಮಚ ಎಣ್ಣೆ.


ಮಾಡುವ ವಿಧಾನ: ತೆಂಗಿನ ತುರಿ, ಹುರಿದ ಒಣಮೆಣಸು ಸೇರಿಸಿ, ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿ. ತೆಗೆಯುವ ಮೊದಲು ಕೊತ್ತಂಬರಿ, ಉದ್ದಿನಬೇಳೆ ಎಣ್ಣೆಯಲ್ಲಿ ಹುರಿದು ಅದಕ್ಕೆ ಹಾಕಿ ಎರಡು ಸುತ್ತು ರುಬ್ಬಿ. ಮಾವಿನ ಹಣ್ಣು ತೊಳೆದು, ಅದರ ತುದಿಭಾಗದಲ್ಲಿ ಗಾಯ ಮಾಡಿ, ಸ್ವಲ್ಪ ನೀರು, ಬೆಲ್ಲ ಸೇರಿಸಿ ಬೇಯಿಸಿ. ನಂತರ ರುಬ್ಬಿದ ಮಸಾಲೆ, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈ ಗಸಿ ಸಾಂಬಾರಿಗಿಂತ ತುಸು ದಪ್ಪಗಿರಬೇಕು. ಅನ್ನ ಚಪಾತಿ ಜೊತೆ ತಿನ್ನಲು ರುಚಿ.